ಬೆಂಗಳೂರು: ಬಿಟ್ ಕಾಯಿನ್ ಹಗರಣದ ಹಿಂದೆ ಯಾರ್ಯಾರು ಇದ್ದಾರೆ ಯಾರನ್ನು ಕೂಡ ಬಿಡುವುದಿಲ್ಲ. ಖಂಡಿತವಾಗಿಯೂ ಬಲಿ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣ 2016ರಿಂದ ನಡೆಯುತ್ತಿದೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. 2016ರಿಂದ ಕರ್ನಾಟಕದಲ್ಲಿ ಬಿಟ್ ಕಾಯಿನ್ ಹಗರಣ ಇದ್ದಿದ್ರೆ, ನಿಮ್ಮ ಸರ್ಕಾರ ಇದ್ದಾಗ ತಾವು ಏಕೆ ತನಿಖೆ ಮಾಡಲಿಲ್ಲ. ರಂದೀಪ್ ಸುರ್ಜೇವಾಲ ಅವರು ಆಗ ಅಧಿಕಾರದಲ್ಲಿದ್ದ ಸಚಿವರು ಹಾಗೂ ಮುಖ್ಯಮಂತ್ರಿಗೆ ಈ ಪ್ರಶ್ನಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು
2016ರಲ್ಲಿ ಶ್ರೀಕಿಯನ್ನು ಬಂಧಿಸಿ ನಂತರ ರಿಲೀಸ್ ಮಾಡಿದ್ರಿ. ಅಂದೇ ವಿಚಾರಣೆ ಮಾಡಿದ್ದರೆ ಎಲ್ಲವೂ ಬಹಿರಂಗವಾಗುತ್ತಿತ್ತು. ಆತ ಬೇಲ್ ತೆಗೆದುಕೊಂಡ ನಂತರ ಕೂಡ ವಿಚಾರಣೆ ಮಾಡಬಹುದಾಗಿತ್ತು. ಆದರೆ ನೀವು ವಿಚಾರಣೆ ಮಾಡಲಿಲ್ಲ. 2020ರಲ್ಲಿ ಆತನನ್ನು ನಾವು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದೇವು. ಈ ವೇಳೆ ಹ್ಯಾಕಿಂಗ್ ಕುರಿತ ವಿಚಾರವೆಲ್ಲಾ ಬಹಿರಂಗವಾಯಿತು. 2018ರಲ್ಲಿ ನೀವು ಅಧಿಕಾರದಲ್ಲಿದ್ದಾಗ ವಿಚಾರಣೆ ಮಾಡಲಿಲ್ಲ. ಈಗ ನಮಗೆ ಪ್ರಶ್ನೆ ಮಾಡುತ್ತೀರಾ? ಶ್ರೀಕಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಬಿಟ್ಟಿದ್ದು ಕಾಂಗ್ರೆಸ್ ಎಂದು ಸುರ್ಜೇವಾಲಾ ಪ್ರಶ್ನೆಗಳಿಗೆ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ
ಒಂದು ಟ್ವಿಟ್ಟರ್ ಹ್ಯಾಂಡಲ್ ಮೇಲೆ ನೀವು ವಿಚಾರಗಳನ್ನು ಪ್ರಸ್ತಾಪ ಮಾಡುತ್ತೀರಾ ಅಂದರೆ ನಿಮ್ಮ ಚಿಂತನೆಯ ದಿವಾಳಿ ಎಷ್ಟಾಗಿದೆ. ಟ್ವಿಟ್ಟರ್ನಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಟ್ವಿಟ್ಟರ್ ವಿಚಾರವನ್ನು ನೀವು ಪ್ರಸ್ತಾಪಿಸುವುದೇ ಆದ್ರೆ, ನೀವು ಸಾಕ್ಷಿ ಪುರಾವೆಗಳನ್ನು ಹಿಡಿದುಕೊಂಡು ಮಾತನಾಡಬೇಕಾಗಿತ್ತು. ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ಲಕ್ಷಗಟ್ಟಲೇ, ಕೋಟಿಗಟ್ಟಲೇ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡುವುದು. ಒಬ್ಬ ರಾಷ್ಟ್ರೀಯ ಪಕ್ಷದ ನಾಯಕನಿಗೆ ಕ್ಷೋಭೆಯಲ್ಲ ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ಹಗರಣವನ್ನು ಬಯಲು ಮಾಡಿದ್ದೆ ನಾವು. ಈ ಕುರಿತಂತೆ ಇಡಿ ಮತ್ತು ಸಿಬಿಐಗೆ ತನಿಖೆಗೆ ಕೊಟ್ಟಿದ್ದೆ ನಾವು. ಇಂದು ಈ ಕುರಿತಂತೆ ತನಿಖೆಯಾಗುತ್ತಿದೆ. ಅವರು ಹಲವಾರು ಮಾಹಿತಿಗಳನ್ನು ಕೇಳಿದ್ದಾರೆ ಅದನ್ನು ಸಹ ಕೊಟ್ಟಿದ್ದೇವೆ. ಇದರ ಹಿಂದೆ ಯಾರ್ಯಾರು ಇದ್ದಾರೆ ಯಾರನ್ನು ಕೂಡ ಬಿಡುವುದಿಲ್ಲ. ಖಂಡಿತವಾಗಿಯೂ ಬಲಿ ಹಾಕುತ್ತೇವೆ. ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇಲ್ಲದೇ ಇರುವವರ ಹೆಸರನ್ನು ಬಹಿರಂಗಪಡಿಸುತ್ತಿದ್ದೀರಾ. ಬಿಟ್ ಕಾಯಿನ್ ಹಗರಣದ ಹಿಂದೆ ಇಬ್ಬರು ಪ್ರಭಾವಿ ವ್ಯಕ್ತಿಗಳು ಇದ್ದಾರೆ ಅಂತೀರಲ್ಲ. ಆ ಇಬ್ಬರು ಪ್ರಭಾವಿಗಳ ಹೆಸರೇಳಿ, ದಾಖಲೆ ರಿಲೀಸ್ ಮಾಡಿ ಎಂದು ಕಾಂಗ್ರೆಸ್ಗೆ ಸವಾಲು ಹಾಕಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ ಮತ್ತು ವ್ಯಕ್ತಿಗಳಿಗೆ ಯಾವುದೇ ಮೋಸ ಆಗಿದ್ದರೆ, ಯಾರು ಮೋಸ ಮಾಡಿದ್ದರೂ ಕೂಡ ಮುಖ, ಮೂಲಾಜಿಲ್ಲದೇ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.