ಎಚ್‍ಡಿಕೆ VS ಯೋಗೇಶ್ವರ್: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಜಾತಿಯವರು ಎಷ್ಟಿದ್ದಾರೆ?

Public TV
2 Min Read
HDK 1

ರಾಮನಗರ: ರಾಜ್ಯ ಚುನಾವಣಾ ದಿನಕಳೆದಂತೆ ರಂಗೇರುತ್ತಿದೆ. ಸಿಎಂ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರ, ಸಿಎಂ ಪುತ್ರ ಯತೀಂದ್ರ ಸ್ಪರ್ಧಿಸಲಿರುವ ವರುಣಾ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಪಟ್ಟಿಗೆ ಚನ್ನಪಟ್ಟಣ ಕ್ಷೇತ್ರ ಸೇರ್ಪಡೆಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ.

ರಾಮನಗರದ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ವೈರಿ ಸಿಪಿ ಯೋಗೇಶ್ವರ್ ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಸ್ವತಃ ತಾವೇ ಕಣಕ್ಕಿಳಿಯೋದಾಗಿ ಚನ್ನಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಘೋಷಿಸಿದ್ದಾರೆ.

HDD HDK

ಯೋಗೇಶ್ವರ್ ಕ್ಷೇತ್ರದಲ್ಲೇ ವಿಕಾಸಪರ್ವ ಸಮಾವೇಶ ನಡೆಸಿದ ಜೆಡಿಎಸ್, ತನ್ನ ಬಲ ಏನು ಅನ್ನೋದನ್ನು ಪ್ರದರ್ಶಿಸಿತು. ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ನಮಗೆ ರಾಮನಗರ- ಚನ್ನಪಟ್ಟಣ ಎರಡೂ ಕಣ್ಣಿದ್ದಂತೆ. ಹೀಗಾಗಿ ಎಚ್‍ಡಿಕೆ ಎರಡೂ ಕಡೆ ನಿಲ್ಲುವ ನಿರ್ಣಯ ಮಾಡಿದ್ದಾರೆ. ನಿಮ್ಮೆಲ್ಲರ ಒತ್ತಡಕ್ಕೆ ತಲೆಬಾಗಿ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಎಚ್‍ಡಿಡಿಗೆ ಬೆಂಬಲ ಇಲ್ಲ ಎಂದು ದುರಹಂಕಾರದಲ್ಲಿ ಮಾತನಾಡಿದ್ದಾರೆ ಎಂದು ಯೋಗೇಶ್ವರ್‍ರನ್ನು ಟೀಕಿಸಿದರು. 2013ರ ಚುನಾವಣೆಯಲ್ಲಿ ಜೆಡಿಎಸ್ ಸೋತಿದ್ದು ನಿಮ್ಮಿಂದಾದ ತಪ್ಪಲ್ಲ. ಚುನಾವಣೆಯಲ್ಲಿ ಅತ್ಯಂತ ವಿಶ್ವಾಸಿಗಳಾಗಿದ್ದವರು ಹೇಗೆ ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ ಅಂತಾ ಹಿಂದಿನದ್ದನ್ನು ಕೆದಕಿದರು. ಚನ್ನಪಟ್ಟಣದ ಜನ ನೀರಲ್ಲಾದ್ರೂ ಹಾಕಿ. ಹಾಲಲ್ಲಾದ್ರೂ ಹಾಕಿ. ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.

kumaraswamy cp yogeshwar

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ:
* ಒಟ್ಟು ಮತದಾರರ ಸಂಖ್ಯೆ – 2,15,214
* ಒಕ್ಕಲಿಗರ ಸಂಖ್ಯೆ – 1,05,928
* ಎಸ್ಸಿ/ಎಸ್ಟಿ ಮತದಾರರ ಸಂಖ್ಯೆ – 39,259
* ಮುಸ್ಲಿಮರ ಸಂಖ್ಯೆ – 24,991
* ಲಿಂಗಾಯಿತರ ಸಂಖ್ಯೆ – 9435
* ಕುರುಬರ ಸಂಖ್ಯೆ – 7136
* ತಿಗಳರ ಸಂಖ್ಯೆ – 8232
* ಬೆಸ್ತರ ಸಂಖ್ಯೆ – 9792
* ಇತರರು – 10,441

2013ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರು ಅನಿತಾ ಕುಮಾರಸ್ವಾಮಿ ವಿರುದ್ಧ 6,464 ಮತಗಳ ಅಂತರಿಂದ ಗೆದ್ದಿದ್ದರು. ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಅವರಿಗೆ 80,099 ಮತಗಳು ಬಿದ್ದಿದ್ದರೆ, ಅನಿತಾ ಕುಮಾರಸ್ವಾಮಿ ಅವರಿಗೆ 73,635 ಮತಗಳು ಬಿದ್ದಿತ್ತು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸದತ್ ಅಲಿ ಖಾನ್ ಅವರಿಗೆ 8,134 ಮತಗಳು ಸಿಕ್ಕಿತ್ತು. 2014ರ ಲೋಕಸಭಾ ಚುನಾವಣೆ ವೇಳೆ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೇ ಅಕ್ಟೋಬರ್ ನಲ್ಲಿ ಪಕ್ಷದ ವರಿಷ್ಠರ ನಿರ್ಧಾರದಿಂದ ಬೇಸತ್ತು ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಯೋಗೇಶ್ವರ್ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *