– ಕರ್ನಾಟಕದ ಬ್ಯಾಂಕ್ಗಳನ್ನ ನುಂಗಾಯ್ತು, ಈಗ ನಂದಿನಿ ನುಂಗಲು BJP ಹೊರಟಿದೆ
ಕೋಲಾರ: ಚುನಾವಣೆಯಲ್ಲಿ ರಾಜ್ಯವನ್ನು ರಕ್ಷಣೆ ಮಾಡುವ ಪಕ್ಷಕ್ಕೆ ಅಧಿಕಾರ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಕಾಂಗ್ರೆಸ್ (Congress) ಜೈಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಬಿಜೆಪಿ (BJP) ಸರ್ಕಾರ ಇದೆ. ಮೇ 10ರಂದು ಚುನಾವಣೆ (Election) ನಡೆಯಲಿದೆ. ರಾಜ್ಯದ ನೆಲ, ಜಲ, ಭಾಷೆಯನ್ನು ಯಾರು ರಕ್ಷಣೆ ಮಾಡುತ್ತಾರೆ ಅಂತ ನೀವು ವಿಚಾರ ಮಾಡಿ ಎಂದು ಹೇಳಿದರು.
ಮೋದಿ 9 ವರ್ಷದಿಂದ ಅಧಿಕಾರ ಮಾಡುತ್ತಿದ್ದಾರೆ. ಈ 5 ವರ್ಷದಲ್ಲಿ ರಾಜ್ಯದಲ್ಲಿ 3 ಜನ ಸಿಎಂ ಆದರು. ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದರು. ಮೋದಿ (Narendra Modi) ಅವರು ಬೊಮ್ಮಾಯಿ ಅವರು ಡಬಲ್ ಎಂಜಿನ್ ಸರ್ಕಾರ ಅಂತಾರೆ. ಎರಡು ಕಡೆ ಸರ್ಕಾರ ಇರುವುದರಿಂದ ರಾಜ್ಯದ ಅಭಿವೃದ್ಧಿ ವೇಗವಾಗಿ ಆಗುತ್ತದೆ ಅಂತಾರೆ. ಆದರೆ ಡಬಲ್ ಎಂಜಿನ್ ಸರ್ಕಾರ ಬಂದ ಮೇಲೆ ರಾಜ್ಯ ಕೆಟ್ಟ ಹೆಸರು ತೆಗೆದುಕೊಂಡಿದೆ ಎಂದು ಕಿಡಿಕಾರಿದರು.
ರಾಜ್ಯದ ಗೌರವವನ್ನು, ಮಾನ ಮರ್ಯಾದೆಯನ್ನು ಕಾಂಗ್ರೆಸ್ ಅವರು ಹಾಳು ಮಾಡಿದ್ದಾರೆ ಎಂದು ಬಾಯಿ ತಪ್ಪಿ ಹೇಳಿದ ಅವರು, 40% ಕಮಿಷನ್ ಹೊಡೆದಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ಕರ್ನಾಟಕದ ಇತಿಹಾಸದಲ್ಲಿ ಬಂದಿಲ್ಲ ಅಂತ ಜನ ಹೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದ ಬ್ಯಾಂಕ್ಗಳನ್ನು ನುಂಗಿದ್ದು ಆಯ್ತು. ಈಗ ನಂದಿನಿ ನುಂಗಲು ಹೊರಟಿದ್ದಾರೆ. ಲಕ್ಷಾಂತರ ರೈತರು ಹಾಲು ಉತ್ಪಾದನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅಮಿತ್ ಶಾ ಅವರು ಸಹಕಾರ ಮಂತ್ರಿ ಆದ ಮೇಲೆ ಕೆಎಂಎಫ್ ಅನ್ನ ಅಮೂಲ್ನಲ್ಲಿ ಮರ್ಜ್ ಮಾಡುವ ಪ್ರಯತ್ನ ಮಾಡಿದರು. ಈಗ ಅಮೂಲ್ ಪ್ರಾಡಕ್ಟ್ಗಳನ್ನ ಕರ್ನಾಟಕದ ಮಾರುಕಟ್ಟೆಗೆ ತಂದು ನಂದಿನ ಪ್ರಾಡಕ್ಟ್ಗಳನ್ನ ಮಾರಾಟ ಮಾಡದಂತೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ನಂದಿನಿ ಪ್ರಾಡಕ್ಟ್ಗಳು ದೊರೆಯುತ್ತಿಲ್ಲ. ಕೃತಕ ಅಭಾವ ನಿರ್ಮಾಣ ಮಾಡಿ ಅಮೂಲ್ ಕರ್ನಾಟಕಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇವತ್ತು ಹಾಲು ಉತ್ಪಾದನೆ 81 ಲಕ್ಷ ಲೀಟರ್ಗೆ ಇಳಿದಿದೆ. ಕನ್ನಡಿಗರಲ್ಲಿ ಮನವಿ ಮಾಡುತ್ತೇನೆ. ಕೇಂದ್ರ ಈ ದುಷ್ಟ ಪ್ರಯತ್ನವನ್ನ ನಾವು ತಡೆಯಬೇಕು. ಇದು ಕನ್ನಡಿಗರ ಮರ್ಯಾದೆ ಪ್ರಶ್ನೆ. ನಾವೆಲ್ಲರೂ ಕನ್ನಡಿಗರು. ಅಮೂಲ್ ಪದಾರ್ಥಗಳನ್ನ ಕೊಂಡುಕೊಳ್ಳಬಾರದು. ನಂದಿನಿ ಪ್ರಾಡಕ್ಟ್ ಮಾತ್ರ ಖರೀದಿ ಮಾಡುತ್ತೇವೆ ಅಂತ ಶಪಥ ಮಾಡಬೇಕು. ಆ ಮೂಲಕ ಕೇಂದ್ರದ ಹುನ್ನಾರ, ಶಾ ಹುನ್ನಾರ ತಡೆಗಟ್ಟಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಆರೋಗ್ಯ ವಿಚಾರಿಸಿದ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು
ಕರ್ನಾಟಕದ ಜನ ಈ ತೀರ್ಮಾನ ಮಾಡಬೇಕು. ಕೇಂದ್ರದ ಹುನ್ನಾರ ಬಯಲಿಗೆ ಎಳೆಯಬೇಕು. ಬಿಜೆಪಿ ಸರ್ಕಾರವನ್ನು ಚುನಾವಣೆಯಲ್ಲಿ ಕಿತ್ತು ಎಸೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕು. ಆಗ ಕೆಎಂಎಫ್ ಉಳಿಯುತ್ತದೆ. ರೈತರ ಬದುಕು ಉಳಿಯುತ್ತೆ. ನಾವು 4 ಗ್ಯಾರಂಟಿ ಕೊಟ್ಟಿದ್ದೇವೆ. ತೆರಿಗೆ ಹಾಕಿ ಜನರನ್ನ ಸುಲಿಗೆ ಮಾಡ್ತಿದ್ದಾರೆ. 2 ಸಾವಿರ ಮಹಿಳೆಯರಿಗೆ ಹಣ ಕೊಡುತ್ತೇವೆ. 10 ಕೆಜಿ ಅಕ್ಕಿ ಕೊಡುತ್ತೇವೆ. ಯುವಕರಿಗೆ ಯುವ ನಿಧಿ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ