ಬೆಳಗಾವಿ: ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ (Ratna Mamani) ಅವರ ನಾಮಪತ್ರ ಸ್ವೀಕೃತವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಯಡವಟ್ಟು ಮಾಡಿಕೊಂಡು ನಾಮಪತ್ರ ತಿರಸ್ಕೃತ ಭೀತಿಯಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಾಮಪತ್ರದಲ್ಲಿ ಲೋಪದೋಷವಿದೆ ಎಂದು ಚುನಾವಣಾ ಆಯೋಗಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ರತ್ನಾ ಮಾಮನಿ ನಾಮಪತ್ರ ಸ್ವೀಕೃತಗೊಂಡಿದೆ. ಅದರಲ್ಲಿರುವ ಲೋಪದೋಷಗಳು ಯಾವುದು ಗಂಭೀರವಲ್ಲ ಎಂದು ತಿಳಿಸಿದ್ದಾರೆ.
ರತ್ನಾ ಮಾಮನಿ ವಕೀಲ ಮಾತನಾಡಿ, ಅರ್ಜಿದಾರರು ಸಲ್ಲಿಸಿದ್ದ ತಕರಾರು ಅರ್ಜಿಯಲ್ಲೂ ತಪ್ಪುಗಳಿತ್ತು ನಾವು ಅದನ್ನು ತೋರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸ್ವೀಕೃತವಾಗಿದ್ದು, ಅರ್ಜಿದಾರರು ಸಲ್ಲಿಸಿದ್ದ ತಕರಾರು ಅರ್ಜಿ ತಿರಸ್ಕೃತವಾಗಿದೆ ಎಂದು ತಿಳಿಸಿದರು.
ಘಟನೆಯೇನು?: ಬೆಳಗಾವಿ (Belagavi) ಜಿಲ್ಲೆಯಲ್ಲಿ ಪ್ರತಿಷ್ಠಿತ ಕ್ಷೇತ್ರವಾದ ಸವದತ್ತಿ ಯಲ್ಲಮ್ಮ ಮತಕ್ಷೇತ್ರಕ್ಕೆ ಆಯ್ಕೆ ಬಯಸಿ ಬಿಜೆಪಿಯ ರತ್ನಾಮಾಮನಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಸಲ್ಲಿಸಿದ ನಾಮಪತ್ರದಲ್ಲಿ ಲೋಪದೋಷಗಳಿವೆ ಎಂಬ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್ (Congress) ಅಭ್ಯರ್ಥಿ ವಿಶ್ವಾಸ ವೈದ್ಯ ಹಾಗೂ ಆಪ್ ಪಕ್ಷದ (AAP) ಅಭ್ಯರ್ಥಿ ಬಾಪುಗೌಡ ಚುನಾವಣಾ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ ನಾಮಪತ್ರ ತಿರಸ್ಕರಿಸಬೇಕು ಎಂದು ಪಟ್ಟು ಹಿಡಿದಿದ್ದರು.
ಫಾರಂ ನಂಬರ್ 29ರ ನಮೂನೆ 2019ರಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ 2018ರ ನಮೂನೆ ತುಂಬಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ನಾಮಪತ್ರ ಪರಿಶೀಲನೆ ಅವಧಿ ಮುಕ್ತಾಯ ಬಳಿಕ ಏ.20ರ ಸಂಜೆ 7:38ಕ್ಕೆ ಬಾಂಡ್ ಪಡೆದು ಮತ್ತೊಂದು ಅಫಿಡವಿಟ್ ಸಲ್ಲಿಸಲಾಗಿದೆ. ಇದು ಸಹ ಕಾನೂನು ಬಾಹಿರ ಎಂದು ಕಾಂಗ್ರೆಸ್, ಆಪ್ ಆರೋಪಿಸಿತ್ತು.