ಬೆಂಗಳೂರು: ರಾಜಕಾರಣ ನನಗೆ ಹೊಸದಲ್ಲ. ನಾನು ಯಾವತ್ತು ಹೊಂದಾಣಿಕೆ ಮಾಡಿಕೊಂಡು ಹೋಗುವ ಮಾತೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕಾರಣವನ್ನು ಫುಟ್ ಬಾಲ್ ಅಲ್ಲ, ಚೆಸ್ ಗೇಮ್ ಎಂದು ಹೇಳಿದ್ದೆ. ಅವರು ಚೆಸ್ ಆಡ್ತಾ ಇದ್ದಾರೆ, ನಾನು ಚೆಸ್ ಆಡ್ತಾ ಇದ್ದೇನೆ. ರಾಜಕಾರಣ ನನಗೆ ಹೊಸದಲ್ಲ. ದೇವೇಗೌಡರ ವಿರುದ್ಧ ಹೋರಾಡಿದ್ದೇನೆ. ಕುಮಾರಣ್ಣನ ವಿರುದ್ಧ ಹೋರಾಡಿದ್ದೇನೆ. ನಾನು ಯಾವತ್ತು ಹೊಂದಾಣಿಕೆ ಮಾಡಿಕೊಂಡು ಹೋಗುವ ಮಾತೇ ಇಲ್ಲ ಎಂದರು.
ಪದ್ಮನಾಭನಗರದಲ್ಲಿ ಸುರೇಶ್ (DK Suresh) ಕೊಡಬೇಕು ಅಂತಾ ಒತ್ತಡ ಇದೆ, ಇಲ್ಲ ಅಂತಾ ಹೇಳಲ್ಲ. ಆದರೆ ರಘುನಾಥ್ ನಾಯ್ಡು ಹಾಕಿದ್ದೇವೆ ಮಾತಾಡಿ ನೋಡುತ್ತೇನೆ. ಅಭ್ಯರ್ಥಿ ಬದಲಾವಣೆ ಇಲ್ಲ. ಹಿಂದೆ ಒಕ್ಕಲಿಗ ಅಭ್ಯರ್ಥಿ ಹಾಕಿದ್ದೆವು ಅಲ್ಲಿ ಸೋತೆವು. ಪದ್ಮನಾಭ ನಗರದಲ್ಲಿ ನಾಯ್ಡುಗಳು ಜಾಸ್ತಿ ಇದ್ದಾರೆ. ಈ ಬಾರಿ ಅಶೋಕ್ (R Ashok) ಪದ್ಮನಾಭ ನಗರದಲ್ಲೂ ಸೋಲ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ?
ಸಿಎಂ ವಿರುದ್ಧ ಪ್ರಬಲ ಸ್ಪರ್ಧಿ ಹಾಕ್ತೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿನಯ್ ಕುಲಕರ್ಣಿಗೆ ಧಾರವಾಡ ಗ್ರಾಮೀಣ ಕೊಟ್ಟಿದ್ದೇವೆ. ಕಾರ್ಯಕರ್ತರ ಜೊತೆ ಮಾತಾಡುತ್ತೇನೆ. ವಿನಯ್ ಕುಲಕರ್ಣಿನಾ ಹಾಕಬೇಕು ಅಂತಾ ನಿಮಗೆ ಆಸೆ ಇದೆ ಅನ್ನಿಸುತ್ತದೆ. ವಿನಯ್ ಕುಲಕರ್ಣಿ ಜೊತೆ ಮಾತಾಡಿ ನೋಡುತ್ತೇನೆ ಎಂದು ಹೇಳಿದರು.
ಲಕ್ಷ್ಮಣ ಸವದಿ ನಮ್ಮನ್ನ ಸಂಪರ್ಕ ಮಾಡಿಲ್ಲ, ನಾನು ಸಂಪರ್ಕ ಮಾಡಿಲ್ಲ. ನಮ್ಮ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದೇನೆ. ನಮ್ಮಲ್ಲಿ ಅಸಮಾಧಾನಿತರಿದ್ದಾರೆ. ಅವರ ಜೊತೆ ಮಾತಾಡ್ತಾ ಇದ್ದೇನೆ. ನಾನು ಯಾರನ್ನು ಸಂಪರ್ಕ ಮಾಡಿಲ್ಲ ಎಂದರು. ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆಗೆ ಬಿದ್ದ ಮತಗಳನ್ನು ಪರಿಗಣಿಸಿದರೆ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?