– ಮಾಜಿ ಸಂಸದೆ ರಮ್ಯಾ ಮಂಡ್ಯದಿಂದ ಸ್ಪರ್ಧೆ?
ಮಂಡ್ಯ : ರಾಜಕೀಯ, ಚುನಾವಣೆ (Election) ಎಂದ್ರೆ ಕೇಳಿ ಬರುವ ಮೊದಲ ಹೆಸರು ಮಂಡ್ಯ. ಇಲ್ಲಿ ರಾಜಕೀಯ ಮಾಡಲು 3 ಪಕ್ಷಗಳು ಹಾತೊರೆಯುತ್ತವೆ. ಮಂಡ್ಯ (Mandya) ವಿಧಾನ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ (Congress) ವಿವಿಐಪಿ ಪ್ರಯೋಗ ಮಾಡಲು ಮುಂದಾಗಿದೆ.
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ರಾಜಕೀಯ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲೂ ಸದ್ದು ಮಾಡುತ್ತೆ. ಈ ಜಿಲ್ಲೆಯಲ್ಲಿ ಗೆಲುವು ಸಾಧಿಸಬೇಕು ಅಂದ್ರೆ ತಂತ್ರಕ್ಕೆ ಪ್ರತಿತಂತ್ರದ ಜೊತೆಗೆ ನಾನಾ ರೀತಿಯ ಸರ್ಕಸ್ ಮಾಡಬೇಕು. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಬಹುಪಾಲು ಕ್ಷೇತ್ರಗಳನ್ನು ಕಬಳಿಸಬೇಕೆಂದು 3 ಪಕ್ಷಗಳು ಹವಣಿಸುತ್ತಿವೆ. ಅದ್ರಲ್ಲೂ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 3 ಪಕ್ಷಗಳು ವಿಭಿನ್ನ ಪ್ರಯೋಗದ ಜೊತೆ ಮಾಸ್ಟರ್ ಪ್ಲ್ಯಾನ್ನ್ನು ಸಿದ್ಧಪಡಿಸಿಕೊಂಡಿದೆ.
ಕಳೆದ ತಿಂಗಳು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚನ್ನಪಟ್ಟಣದ ಜೊತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗುತ್ತಿತ್ತು. ಇತ್ತ ಬಿಜೆಪಿಯಿಂದ (BJP) ಇಂದಿಗೂ ಹಲವು ಜನರು ಮಂಡ್ಯದಿಂದ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಕಣಕ್ಕೆ ಇಳಿಯುತ್ತಾರೆ ಹೇಳುತ್ತಿದ್ದಾರೆ. ಇನ್ನೂ ಕಾಂಗ್ರೆಸ್ ಸಹ ನಾವೇನ್ ಕಮ್ಮಿ ಇಲ್ಲ ನಮ್ಮಲ್ಲೂ ವಿಐಪಿ ಅಭ್ಯರ್ಥಿ ಇದ್ದಾರೆ ಎಂದು ಮಾಜಿ ಸಂಸದೆ ಹಾಗೂ ಮೋಹಕ ತಾರೆ ರಮ್ಯಾ (Ramya) ಅವರನ್ನು ಮಂಡ್ಯ ಚುನಾವಣೆ ಅಖಾಡಕ್ಕೆ ಧುಮುಕಿಸಲು ಗ್ರೌಂಡ್ ಸೆಟ್ ಮಾಡುತ್ತಿದೆ ಎನ್ನಲಾಗುತ್ತಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು 16 ಮಂದಿ ಇದ್ದು, ಇವರೆಲ್ಲರೂ ಟಿಕೆಟ್ಗಾಗಿ ಕೆಪಿಸಿಸಿಗೆ ಅರ್ಜಿಯನ್ನು ಸಹ ಹಾಕಿದ್ದಾರೆ. ಸದ್ಯ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕೇವಲ ಮೂರು ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಆಗಲಿದ್ದು, ಇದ್ರಲ್ಲಿ ಎರಡು ಕ್ಷೇತ್ರಗಳ ಟಿಕೆಟ್ ಅನೌನ್ಸ್ ಆಗುತ್ತೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ನ್ನು ಕಾಂಗ್ರೆಸ್ ಅನೌನ್ಸ್ ಮಾಡದೇ ಉಳಿಸಿಕೊಳ್ಳುತ್ತೆ. ಯಾಕಂದ್ರೆ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ವಿಐಪಿ ಕ್ಷೇತ್ರ ಎಂದು ಉಳಿಸಿಕೊಂಡು ನಾಮಪತ್ರದ ಅಂತಿಮ ದಿನಾಂಕಕ್ಕೆ ವಿವಿಐಪಿಯನ್ನು ಕಣಕ್ಕೆ ಇಳಿಸಲು ಪ್ಲ್ಯಾನ್ ಮಾಡಿದೆ. ಮಾಜಿ ಸಂಸದೆ ರಮ್ಯಾ ಮಂಡ್ಯಗೆ ಬರುವ ವಿವಿಐಪಿ ಎಂದು ಹೇಳಲಾಗುತ್ತಿದ್ದು, ರಮ್ಯಾ ಬರದೇ ಇದ್ರೆ ಮತ್ಯಾವ ವಿಐಪಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಎಂಬುದು ಮಂಡ್ಯ ಜನರಲ್ಲಿ ಕಾಡುತ್ತಿದೆ. ಇದನ್ನೂ ಓದಿ: ವಾರಸುದಾರರಿಲ್ಲದ 35,000 ಕೋಟಿ ರೂ. RBIಗೆ ವರ್ಗಾವಣೆ
ಒಟ್ಟಾರೆ ಚುನಾವಣೆಯ ದಿನಾಂಕ ಹೀಗಾಗಲೇ ಘೋಷಣೆಯಾಗಿದ್ದು, ಬೆರಳೆಣಿಕೆ ದಿನಗಳಲ್ಲಿ ನಾಮಪತ್ರ ಸಲ್ಲಿಕೆಯ ದಿನಾಂಕವು ಆರಂಭವಾಗುತ್ತದೆ. ಹೀಗಾಗಿರುವಾಗ ಮಂಡ್ಯದಲ್ಲಿ ಕಾಂಗ್ರೆಸ್ನಿಂದ ಯಾವ ವಿಐಪಿ ಕಣಕ್ಕೆ ಇಳಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಜಾರಕಿಹೊಳಿ – ಸವದಿ ಬಣ ರಾಜಕೀಯಕ್ಕೆ ಬ್ರೇಕ್; ಹೈಕಮಾಂಡ್ ಸಂದೇಶ ರವಾನಿಸಿದ ಜೋಶಿ