ಶಿವಮೊಗ್ಗ: ಚುನಾವಣೆ ಹೊತ್ತಲ್ಲೇ ಬಿಜೆಪಿಗೆ (BJP) ಮತ್ತೊಂದು ಶಾಕ್ ಎದುರಾಗಿದೆ. ಆಯನೂರು ಮಂಜುನಾಥ್ (Ayanur Manjunath) ಅವರು ವಿಧಾನ ಪರಿಷತ್ ಸದಸ್ಯ (MLC) ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಯನೂರು ಮಂಜುನಾಥ್, ಸದ್ಯದಲ್ಲಿಯೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಿಧಾನಸಭಾ ಚುನಾವಣೆಯಲ್ಲಿ (Assembly Election) ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.
ಶಿವಮೊಗ್ಗ (Shivamogga) ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲೇಬೇಕು ಎಂಬ ಇಚ್ಛೆ ಹೊಂದಿದ್ದೇನೆ. ಈಗಾಗಲೇ ನನ್ನ ನಿಲುವು, ಭಾವನೆ ಪ್ರಕಟ ಮಾಡಿದ್ದೇನೆ. ಪಕ್ಷದ ವೇದಿಕೆಯಲ್ಲೂ ನನ್ನ ವಿನಂತಿ ಸಲ್ಲಿಸಿದ್ದೇನೆ. ನನ್ನ ಆಸೆಗೆ ಪೂರಕವಾಗಿ ಬಿಜೆಪಿಯಿಂದ ಟಿಕೆಟ್ ಸಿಗುವ ಲಕ್ಷಣ ಕಂಡುಬಂದಿಲ್ಲ. ಅವರವರ ಮಕ್ಕಳ ಹೆಸರು ಓಡಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ನನ್ನ ಬಗ್ಗೆ ಯಕಶ್ಚಿತ್ ಮಾತನಾಡಿದ ಈಶ್ವರಪ್ಪ, ಅವರಾಗಲಿ, ಅವರ ಮಗನಾಗಲಿ ಸ್ಪರ್ಧೆ ಮಾಡಲಿ. ಈ ಬಾರಿ ಅವರು ಚುನಾವಣಾ ಅಖಾಡಕ್ಕೆ ಬರಬೇಕು ಎಂದು ಸವಾಲು ಹಾಕಿದರು.
ನಿಮಗೆ ಅಷ್ಟೊಂದು ಪ್ರಭಾವ ಇದ್ದರೆ ನಿಮ್ಮ ಮಗನನ್ನು ನಿಲ್ಲಿಸಿಕೊಂಡು ಗೆಲ್ಲಿಸಿ ನಿಮ್ಮ ಪ್ರಭಾವ ತೋರಿಸಿ. ಎಲ್ಲಿಯೂ ನೀವು ಗೌರವದಿಂದ ನಡೆದುಕೊಂಡಿಲ್ಲ. ನೀವು ಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಮಾಡುವವರು, ಹಾಗಾಗಿ ಪಾಪ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲ್ಲ ನೀವು. ಅಧಿಕಾರದ ಹಪಾಹಪಿ ಇದೆ ನಿಮಗೆ. ಮಂತ್ರಿ ಸ್ಥಾನಕ್ಕಾಗಿ ಸದನಕ್ಕೆ ಹೋಗಲಿಲ್ಲ. ಜಿಲ್ಲಾ ಮಂತ್ರಿಯಾಗಿದ್ದವರು ನೀವು ಅದಕ್ಕೆ ತಕ್ಕ ಗೌರವ ಉಳಿಸಿಕೊಂಡಿದ್ದೀರಾ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.
ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಜಿಲ್ಲೆಗೆ ಬಂದಾಗ ಸ್ವಾಗತ ಮಾಡಿದ್ದೀರಾ? ಯಡಿಯೂರಪ್ಪ ಅವರಿಗೆ ಸದಾ ಅಪಮಾನ ಮಾಡಿದ್ದೀರಾ. ತಾವು ಅರ್ಹತೆ ಕಳೆದುಕೊಂಡಿದ್ದೀರಾ. ತಮಗೆ ಅರ್ಹತೆ, ಶಕ್ತಿ ಇದ್ದರೆ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಿ. ನಿಮ್ಮ ಗೋಡೌನ್ನಲ್ಲಿರುವ ಎಣಿಕೆ ಮೆಷಿನ್ ಸೀಜ್ ಆಗಿದ್ದರೆ ಹೊಸ ಮೆಷಿನ್ ತರಿಸಿಕೊಳ್ಳಿ. ಕಾರ್ಪೋರೇಟರ್ಗಳು ನಿಮ್ಮ ಕುಟುಂಬದ ಹಿಡಿತದಲ್ಲಿ ನರಳುತ್ತಿದ್ದಾರೆ. ಕಾರ್ಯಕರ್ತರು ನೀವೊಬ್ಬರಾದರೂ ಅವರ ವಿರುದ್ಧ ಧ್ವನಿ ಎತ್ತಿದ್ದೀರಾ, ನೀವು ಸ್ಪರ್ಧೆ ಮಾಡಿ ನಾವು ನಿಮ್ಮ ಜೊತೆ ಇರ್ತೀವಿ ಅಂದಿದ್ದಾರೆ ಎಂದರು. ಇದನ್ನೂ ಓದಿ: ಶಾಸಕರ ಪುತ್ರನ ಕಾರನ್ನು ತಪಾಸಣೆ ಮಾಡದೆ ಬಿಟ್ಟು ಕಳಿಸಿದ ಚೆಕ್ ಪೋಸ್ಟ್ ಸಿಬ್ಬಂದಿ
ಶಿವಮೊಗ್ಗದಲ್ಲಿ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿದೆ. ಒಂದೂವರೆ ಕೋಟಿ ಹಣ ಸಿಕ್ಕಿದೆ. ಇಷ್ಟೊಂದು ಹಣ, ಇಷ್ಟೊಂದು ಸೀರೆ ತರಿಸುವಂತಹ ವ್ಯಾಪಾರಿ ಶಿವಮೊಗ್ಗದಲ್ಲಿ ಯಾರು ಇಲ್ಲ. ಈಗಾಗಲೇ ವಾರ್ಡ್ಗಳಲ್ಲಿ ಹಣ ಡಿಪಾಸಿಟ್ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಅಭಿವೃದ್ಧಿ ಆಗಿರೋದು ಯಡಿಯೂರಪ್ಪ, ರಾಘವೇಂದ್ರ ಅವರಿಂದ. ನೀವೇನು ಮಾಡಿದ್ದೀರಾ ಹೇಳಿ, 32 ವರ್ಷದ ರಾಜಕಾರಣದಲ್ಲಿ ನೀವು ಮಾಡಿದ್ದು ಏನಿಲ್ಲ. ನೀವು ಪ್ರಚೋದನೆಯಿಂದ ಮಾತನಾಡಿದ್ದು ಅಷ್ಟೇ. ಈ ಬಾರಿ ಇಂತಹ ಶೈಲಿ ನಡೆಯಲು ಬಿಡುವುದಿಲ್ಲ. ನೀವು ಶಾಸಕರಾಗಿದ್ದಾಗ ಕ್ಷೇತ್ರದ ಜನರ ಬಗ್ಗೆ ಮಾತನಾಡಿದ್ದು ಇದ್ದರೆ ತೋರಿಸಿ. ಕ್ಷೇತ್ರದಲ್ಲಿ ಸಂಘಟನೆ ಪ್ರಬಲವಾಗಿದೆ. ಕಾರ್ಯಕರ್ತರ ಹೆಗಲ ಮೇಲೆ ಕೈಯಿಟ್ಟು ಅಧಿಕಾರ ಮಾಡಿದ್ದೀರಾ. ನಾನು ಅಖಾಡಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ದುರ್ಮರಣ