ಉಡುಪಿ: ಇಂದು ಆಷಾಢ ಅಮಾವಾಸ್ಯೆ. ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆಯನ್ನು ಹಾಳೆ ಮರದ ಕಷಾಯ ಕುಡಿಯುವ ಮೂಲಕ ಆಚರಣೆ ಮಾಡಲಾಗುತ್ತದೆ.
ಕಷಾಯ ತಯಾರಿಸುವ ದ್ರವ್ಯಗಳು ನಗರವಾಸಿಗಳಿಗೆ ಲಭಿಸದ ಕಾರಣ ತುಳುಕೂಟ ಉಡುಪಿ ಸಂಘಟನೆ ಹಾಳೆ ಮರದ ಕಷಾಯದ ವ್ಯವಸ್ಥೆ ಮಾಡಿತ್ತು. ಉಡುಪಿಯ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಹಾಳೆ ಮರದ ಕಷಾಯ, ಮೆಂತೆ ಗಂಜಿ ಮತ್ತು ತುಪ್ಪದ ವ್ಯವಸ್ಥೆ ಮಾಡಿತ್ತು.
ಆಷಾಢ ಮಾಸದಲ್ಲಿ ಹಾಳೆ ಮರದ ತೊಗಟೆಯಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣ ಇರುತ್ತದೆ. ಅದರ ರಸ ತೆಗೆದು ಬೆಳ್ಳುಳ್ಳಿ, ಜೀರಿಗೆ, ಓಂ ಕಾಳು, ಮೆಣಸು, ಬೆರೆಸಿ ಒಗ್ಗರಣೆ ಕೊಟ್ಟು ಕಷಾಯ ಮಾಡಿ ಕುಡಿದರೆ ಸಕಲ ರೋಗ ಗುಣವಾಗುತ್ತದೆ. ಮಳೆಗಾಲದಲ್ಲಿ ಬರುವ ಯಾವುದೇ ರೋಗಗಳು ಬಾಧಿಸುವುದಿಲ್ಲ.
ಇದು ಆಯುರ್ವೇದದಲ್ಲೂ ಸಾಬೀತಾಗಿದೆ. ಹಾಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಕಾರ್ಯಕ್ರಮಕ್ಕೆ ಕೈ ಜೋಡಿಸಿ ಕಷಾಯ ತಯಾರಿಸುವ ವ್ಯವಸ್ಥೆ ಮಾಡಿತ್ತು. ಸಾವಿರಾರು ಜನ ಒಂದೇ ಕಡೆ ಕಷಾಯ ಕುಡಿದು, ಮೆಂತೆ ಗಂಜಿ ತಿಂದು ಆಷಾಢ ಅಮಾವಾಸ್ಯೆ ಆಚರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews