ಮುಂಬೈ: ಬಾಹುಬಲಿಯ ಹೀರೋ ಪ್ರಭಾಸ್ ಅವರನ್ನು ಬಾಲಿವುಡ್ ಸಿನಿಮಾದಲ್ಲಿ ಲಾಂಚ್ ಮಾಡಲು ಮುಂದಾಗಿದ್ದ ನಿರ್ಮಾಪಕ ಕರಣ್ ಜೋಹರ್ ಈಗ ತಮ್ಮ ಈ ಪ್ರಯತ್ನದಿಂದ ಹಿಂದಕ್ಕೆ ಸರಿದಿದ್ದಾರೆ.
ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹಿಂದಿ ಆವೃತ್ತಿಯ ಬಾಹುಬಲಿ ಸಿನಿಮಾವನ್ನು ಕರಣ್ ಜೋಹರ್ ಬಿಡುಗಡೆ ಮಾಡಿದ್ದರು. ಹೀಗಾಗಿ ಬಾಲಿವುಡ್ ನಲ್ಲಿ ಪ್ರಭಾಸ್ ನನ್ನು ಕರೆತರಲು ಕರಣ್ ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದ್ದರು.
ಪ್ರಭಾಸ್ ನನ್ನು ಬಾಲಿವುಡ್ ನಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಲು ಕರಣ್ ನಿರ್ಧರಿಸಿದ್ದರು. ಆದರೆ ಬಾಹುಬಲಿ ಸಿನಿಮಾದ ಯಶಸ್ಸಿನಿಂದಾಗಿ ದಿಢೀರನ್ನೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ಹಿನ್ನೆಲೆಯಲ್ಲಿ ಪ್ರಭಾಸ್ ಅವರನ್ನು ಲಾಂಚ್ ಮಾಡುವ ಪ್ರಯತ್ನವನ್ನು ಕೈಬಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಾಲಿವುಡ್ ನಲ್ಲಿ ನಟಿಸಲು ಪ್ರಭಾಸ್ ಬರೋಬ್ಬರಿ ರೂ. 20 ಕೋಟಿ ಸಂಭಾವನೆ ಕೇಳಿದ್ದರಂತೆ. ಪ್ರಭಾಸ್ ಬೇಡಿಕೆಗೆ ಕರಣ್ ಏನೂ ಹೇಳದೆ ಸುಮ್ಮನಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಭಾಸ್ ಹೆಸರು ಮಾಡಿದ್ದರೂ ಹಿಂದಿಯಲ್ಲಿ ಅಷ್ಟೊಂದು ಪ್ರಸಿದ್ಧಿ ಇಲ್ಲದ ಕಾರಣ ಕರಣ್ ಜೋಹರ್ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನಲ್ಲಿ ನಟಿಸಲು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಕೂಡ ಇಷ್ಟು ಸಂಭಾವನೆ ನೀಡಿರಲಿಲ್ಲ ಎಂದು ವರದಿಯೊಂದು ತಿಳಿಸಿದೆ. ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ದಕ್ಷಿಣ ಭಾರತದಲ್ಲಿ ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
ಪ್ರಭಾಸ್ ಈಗ ‘ಸಾಹೋ’ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚಿಗೆ ಅವರ ಹುಟ್ಟುಹಬ್ಬದ ದಿನದಂದು ಚಿತ್ರದ ಮೊದಲ ಲುಕ್ ಅನ್ನು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಪ್ರಭಾಸ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.