‘ಕನ್ನಡ ದೇಶದೊಳ್’ ಹಾಗೂ ‘ಕಲಿವೀರ’ ಚಿತ್ರಗಳ ಖ್ಯಾತಿಯ ನಿರ್ದೇಶಕ ಅವಿರಾಮ್ ಕಂಠೀರವ ಅವರು ನಿರ್ದೇಶನ ಮಾಡಿರುವ ಸಿನಿಮಾ ಕರಳೆ ಚಿತ್ರದ ವಿವಾದಿತ ಪೋಸ್ಟರ್ ಇದೀಗ ಬ್ಯಾನ್ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಜೊತೆಗೂಡಿ ಕರಳೆ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬ್ಯಾನ್ ಮಾಡಲಾಗಿದೆ. ಕನ್ನಡ ಚಲನಚಿತ್ರದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದು ಚಿತ್ರದ ಪೋಸ್ಟರ್ ಬ್ಯಾನ್ ಆಗಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್ಟಿಆರ್ ಸಿನಿಮಾದಲ್ಲಿ ರಶ್ಮಿಕಾ ಐಟಂ ಡ್ಯಾನ್ಸ್?
‘ಕರಳೆ’ ಚಿತ್ರದ ನಾಯಕಿ ಕುಂಕುಮ್ ಹರಿಹರ್ ಅವರು ಇತ್ತೀಚಿಗೆ ‘ಕರಳೆ’ಯ ಫಸ್ಟ್ ಲುಕ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಚಿತ್ರದ ನಿರ್ದೇಶಕರ ವಿರುದ್ಧ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದರು. ಈ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟಿ ಸೇರಿದಂತೆ ಚಿತ್ರತಂಡವನ್ನು ವಾಣಿಜ್ಯ ಮಂಡಳಿ ಕರೆದು ವಿವಾದದ ಕುರಿತು ಮಾಧ್ಯಮದವರ ಎದುರು ಸಭೆ ನಡೆಸಿದರು. ನಟಿ ಸಲ್ಲಿಸಿದ ಆರೋಪ ಪತ್ರದಲ್ಲಿ ಅವರ ಒಪ್ಪಿಗೆ ಪಡೆಯದೆ ಚಿತ್ರದ ನಾಯಕಿಯ ಮತ್ತೊಂದು ಬೋಲ್ಡ್ ಪೋಸ್ಟರ್ ಅನ್ನು ನಿರ್ದೇಶಕರು ಬಿಡುಗಡೆ ಮಾಡುವ ಆತಂಕ ನಟಿ ಕುಂಕುಮ್ ವ್ಯಕ್ತಪಡಿಸಿದರು. ಇದನ್ನೂ ಓದಿ:ಕನ್ನಡ ಕಿರುತೆರೆಯ ಖ್ಯಾತ ನಟ ಶ್ರೀಧರ್ ನಾಯಕ್ ನಿಧನ
ಇದೊಂದು ಸೂಕ್ಷ್ಮ ವಿಷಯ ಎಂದು ಅರಿತ ವಾಣಿಜ್ಯ ಮಂಡಳಿ, ಈ ವಿವಾದವನ್ನು ಬಗೆಹರಿಸಿ ‘ಕರಳೆ’ಯ ಫಸ್ಟ್ ಲುಕ್ ವಿವಾದಿತ ಪೋಸ್ಟರ್ ಅನ್ನು ಬ್ಯಾನ್ ಮಾಡಿದೆ ಮತ್ತು ನಟಿಯ ಮತ್ತೊಂದು ಹೊಸ ಪೋಸ್ಟರ್ ಅನ್ನು ವಾಣಿಜ್ಯ ಮಂಡಳಿಗೆ ತೋರಿಸಿ ಸಮ್ಮತಿ ಪಡೆದು ಬಿಡುಗಡೆ ಮಾಡಲು ಸೂಚಿಸಿದೆ.
ಪತ್ರಿಕಾಗೋಷ್ಠಿಯಲ್ಲಿ, ನಿರ್ದೇಶಕ ಅವಿರಾಮ್ ಕಂಠೀರವ ಮಾತನಾಡಿ, ಈ ಪೋಸ್ಟರ್ ವಿಷಯ ಬೇಡವಾದ ವಿವಾದವಾಗಿದೆ. ನಾನು ನನ್ನ ನೇರ ಹಾಗೂ ಸ್ಪಷ್ಟ ದೃಷ್ಟಿಕೋನದಿಂದ ಈ ಪೋಸ್ಟರ್ ರಚಿಸಿದ್ದಾಗಿ ಹೇಳಿದ್ದಾರೆ. ಈ ಪೋಸ್ಟರ್ನಿಂದ ಇಷ್ಟು ದೊಡ್ಡ ವಿವಾದ ಆಗಲಿದೆ ಎನ್ನುವ ಕಲ್ಪನೆ ನನಗಿರಲಿಲ್ಲ. ನಾನು ನನ್ನ ಸಿನಿಮಾದಲ್ಲಿನ ಕಥೆಯ ಆಳವನ್ನು ಬಹಳ ಬಲವಾಗಿ ಪ್ರಸ್ತುತ ಪಡಿಸುವ ಕಾರಣಕ್ಕಾಗಿ ಈ ಪೋಸ್ಟರ್ ಮಾಡಿದ್ದೆ. ಅದರಲ್ಲಿ ತಾಯಿ ಮಗುವಿನ ಸಂಬಂಧ ತೋರಿಸಲಾಗಿದೆ. ಹಾಗಾಗಿ ನನ್ನ ದೃಷ್ಟಿಯಿಂದ ಅದು ವಿವಾದಿತ ಪೋಸ್ಟರ್ ಆಗಿರಲಿಲ್ಲ. ಆದರೆ ಇಂದು ವಾಣಿಜ್ಯ ಮಂಡಳಿ ಅಧ್ಯಕ್ಷರು, ನಿರ್ಮಾಪಕರ ಸಂಘದ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ ನಂತರ ನಾನು ಇದೀಗ ನಟಿಯ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆಗೆ ಮುನ್ನ ಅದನ್ನು ಅವರಿಗೆ ಹಾಗೂ ಮಂಡಳಿಯ ಅಧ್ಯಕ್ಷರಿಗೂ ತೋರಿಸಲು ಸಮ್ಮತಿಸಿದ್ದೇನೆ ಎಂದರು. ಸಿನಿಮಾ ಈ ಕಾಲಘಟ್ಟದಲ್ಲಿ ಜನರಿಗೆ ತಲುಪುವಂತೆ ಮಾಡಲು ಇಂತಹ ಅರ್ಥಪೂರ್ಣವಾದ ಪೋಸ್ಟರ್ ಅಗತ್ಯವಿದೆ ಎನ್ನುವುದು ನನ್ನ ಭಾವನೆಯಾಗಿತ್ತು. ನನ್ನ ದೃಷ್ಟಿಕೋನದ ಪ್ರಕಾರ ಇದು ಬೇಕಿತ್ತು ಎಂದು ನಿರ್ದೇಶಕ ಹೇಳಿದ್ದು, ಮುಂದೆ ಬಿಡುಗಡೆ ಆಗಲಿರುವ ಪೋಸ್ಟರ್ ಇಂತಹ ಯಾವ ವಿವಾದಕ್ಕೆ ಆಸ್ಪದ ನೀಡುವಂತಿರುವುದಿಲ್ಲ ಎನ್ನುವ ಭರವಸೆಯನ್ನು ನೀಡಿದ್ದಾರೆ.
ನಟಿ ಕುಂಕುಮ್ ಹರಿಹರ್ ಅವರು ಮಾತನಾಡಿ, ನಾನು ಈ ವಿಚಾರವನ್ನು ವಾಣಿಜ್ಯ ಮಂಡಳಿವರೆಗೆ ತಂದಿರುವ ಬಗ್ಗೆ ನನಗೂ ಬೇಸರವಿದೆ. ಆದರೆ ನಾನು ಈ ಚಿತ್ರದ ಭಾಗವಾಗಿರುವ ಕಾರಣ. ನನಗೆ ಸಂಬಂಧಿಸಿದ ಚಿತ್ರದ ಪೋಸ್ಟರ್ ಬಿಡುಗಡೆಯ ಬಗ್ಗೆ ನನಗೂ ತಿಳಿಯಬೇಕಿದೆ ಎನ್ನುವುದು ನನ್ನ ಮಾತು. ಆದರೆ ಈಗ ನಿರ್ದೇಶಕರು ಪೋಸ್ಟರ್ಗೆ ಸಂಬಂಧಿಸಿ ಸ್ಪಷ್ಟನೆ ಕೊಟ್ಟಿರುವುದರಿಂದ ನಾನು ಸಹ ಅವರ ಮುಂದಿನ ನಡೆಗೆ ಒಪ್ಪಿಗೆ ಸೂಚಿಸಿದ್ದೇನೆ ಎಂದರು. ನಾನೊಬ್ಬ ಕಲಾವಿದೆಯಾಗಿ ಈ ಪೋಸ್ಟರ್ ನೋಡಿದರೆ ನನಗೆ ಈ ಪೋಸ್ಟರ್ ಬಹಳ ಚೆನ್ನಾಗಿ ಕಾಣುತ್ತದೆ. ಆದರೆ ಪೋಸ್ಟರ್ ನೋಡುವವರೆಲ್ಲಾ ಇದನ್ನು ಕಲಾವಿದರ ದೃಷ್ಟಿಕೋನದಿಂದಲೇ ನೋಡುತ್ತಾರೆ ಎನ್ನಲಾಗುವುದಿಲ್ಲ. ಕೆಟ್ಟದಾಗಿ ನೋಡುವವರಿಗೆ ಅದು ಕೆಟ್ಟದಾಗಿಯೇ ಕಾಣುತ್ತದೆ. ನನಗೀಗಾಗಲೇ ಸಾಕಷ್ಟು ಜನರು ಕರೆ ಮಾಡಿ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸಿನಿಮಾ ಅದೆಷ್ಟು ಚೆನ್ನಾಗಿ ಮೂಡಿ ಬಂದಿದೆ ಎನ್ನುವುದು ನನಗೆ ತಿಳಿದಿದೆ. ಆದರೆ ಈ ಪೋಸ್ಟರ್ ನೋಡಿದರೆ ಜನರಿಗೆ ತಪ್ಪು ತಿಳುವಳಿಕೆ ಮೂಡಿಸುತ್ತದೆ. ಇದರ ಬಗ್ಗೆ ನಿರ್ದೇಶಕರು ಸ್ಪಷ್ಟನೆ ಕೊಡಬೇಕಾಗಿತ್ತು. ಈ ಮುಂಚೆಯೇ ಸ್ಪಷ್ಟನೆ ಕೊಟ್ಟಿದ್ದರೆ ಇಷ್ಟು ದೊಡ್ಡ ವಿವಾದವೂ ಆಗುತ್ತಿರಲಿಲ್ಲ ಎಂದು ನಟಿ ಹೇಳಿದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ರವರು ಮಾತನಾಡಿ, ದೂರು ಕೊಟ್ಟ ಕಲಾವಿದೆ ಮತ್ತು ನಿರ್ದೇಶಕರು ರಾಜಿ ಮಾಡಿಕೊಂಡಿದ್ದಾರೆ. ಹಾಗಾಗಿ ಇದನ್ನು ನಾವೀಗ ಅಂತಿಮವಾಗಿ ಬಗೆಹರಿಸಿದ್ದೇವೆ. ಮುಂದಿನ ದಿನದಲ್ಲಿ ನಿರ್ದೇಶಕರು ಯಾವುದೇ ಪೋಸ್ಟರ್ ಮಾಡಿದರೂ ಕಲಾವಿದರೆಲ್ಲರಿಗೆ ತೋರಿಸಿಯೇ ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ವಿವಾದ ಸುಖಾಂತ್ಯವಾಗಿದೆ ಎಂದು ಬಣಕಾರ್ ಹೇಳಿದರು.ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ನರಸಿಂಹುಲು ಮಾತನಾಡಿ, ನಾವೆಂದೂ ಹೆಣ್ಣಿಗೆ ನೋವಾಗುವ ಸೂಕ್ಷ್ಮ ವಿಚಾರಗಳನ್ನು ಸಹಿಸುವುದಿಲ್ಲ. ಹೆಣ್ಣು ಮಕ್ಕಳಿಗೆ ನೋವಾಗುವ ಯಾವ ವಿಚಾರವನ್ನೂ ತೋರಿಸಲು ವಾಣಿಜ್ಯ ಮಂಡಳಿ ಒಪ್ಪಿಗೆ ಸೂಚಿಸಿರುವುದಿಲ್ಲ ಎಂದರು.
ಈ ಚಿತ್ರದ ನಿರ್ಮಾಪಕ ಪಾಲಾಕ್ಷ ಅವರು ಮಾತನಾಡಿ, ಪೋಸ್ಟರ್ ವಿವಾದ ಬಗೆಹರಿಸಿದಕ್ಕೆ ಧನ್ಯವಾದ ಸೂಚಿಸಿದರು ಮತ್ತು ಸಿನಿಮಾ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಇದರಲ್ಲಿ ಯಾವ ಅಶ್ಲೀಲತೆ ಇಲ್ಲ. ಇಂದು ಈ ವಿವಾದ ಬಗೆಹರಿದಿದ್ದು, ಮುಂದಿನ ದಿನದಲ್ಲಿ ಯಾವ ಅಡ್ಡಿ ಆತಂತವಿಲ್ಲದೆ ಚಿತ್ರ ಪೂರ್ಣವಾಗುತ್ತದೆ ಎನ್ನುವ ಭರವಸೆ ಇದೆ. ಇಂತಹ ಉತ್ತಮವಾದ ಚಿತ್ರಕ್ಕೆ ಮಾಧ್ಯಮದವರು, ಜನರು ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.
ವಿಭಿನ್ನ ಕಥೆ ಹೊಂದಿರುವ ‘ಕರಳೆ’ ಸಿನಿಮಾ ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಮಾಜದ ವಾಸ್ತವ ಅಂಶಗಳೊಂದಿಗೆ ಚಿತ್ರೀಕರಿಸಲಾಗುತ್ತಿದೆ. ಎಮೋಷನಲ್, ರಾ, ಮನಕಲಕುವ ದೃಶ್ಯಗಳು ಚಿತ್ರದಲ್ಲಿ ಇರಲಿವೆ. ಈ ಸಿನಿಮಾ ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದೆ. ಕನ್ನಡ ಮತ್ತು ಚೀನಾ ಭಾಷೆಯಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿರುವ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ‘ಕರಳೆ’ ಚಿತ್ರ ಪಾತ್ರವಾಗಿದೆ.
View this post on Instagram
‘ಕರಳೆ’ ಸಿನಿಮಾದ ವಿವಾದವೇನು?
‘ಕರಳೆ’ ಚಿತ್ರದ ಪೋಸ್ಟರ್ ಬಗ್ಗೆ ತಕರಾರು ಎತ್ತಿದ್ದರು. ನಿರ್ದೇಶಕರು ರಿಲೀಸ್ ಮಾಡಿರುವ ಸಿನಿಮಾದ ಪೋಸ್ಟರ್ನಲ್ಲಿ ಇರುವುದು ನಾನಲ್ಲ. ಈ ಪೋಸ್ಟರ್ ಹೊರ ಬಿದ್ದ ಬಳಿಕ ಕೆಲವರು ಕೆಟ್ಟದಾಗಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಆದರೆ, ನಿರ್ದೇಶಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಸರಿಯಾದ ಉತ್ತರ ಕೊಡುತ್ತಿಲ್ಲ ಎಂದು ವಿಡಿಯೋ ಮಾಡಿದ್ದರು. ಆ ಪೋಸ್ಟರ್ನಲ್ಲಿ ಆಗ ತಾನೆ ಜನ್ಮ ನೀಡಿದ ಮಹಿಳೆಯ ಮೇಲೆ ಮಗುವನ್ನು ಮಲಗಿಸಿರುವ ಫೋಟೋವಿತ್ತು. ಇದರಲ್ಲಿ ಇರುವುದು ನಟಿ ಕುಂಕುಮ್ ಎಂದೇ ಅವರ ಆತ್ಮೀಯರು, ಸಂಬಂಧಿಗಳು ನಂಬಿದ್ದರು. ಈ ಬಗ್ಗೆ ಅವರು ಪ್ರಶ್ನೆ ಮಾಡಿದ್ದರು. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಶೇರ್ ಆದಲ್ಲಿಂದ ಕೆಟ್ಟ ಕಾಮೆಂಟ್ಗಳು ಬಂದಿತ್ತು. ಹೀಗಾಗಿ ನಿರ್ದೇಶಕರು ಈ ಬೋಲ್ಡ್ ಪೋಸ್ಟರ್ನಲ್ಲಿ ಇರುವುದು ತಾನಲ್ಲ ಅಂತ ಕ್ಲ್ಯಾರಿಟಿ ಕೊಡಬೇಕು. ಇಲ್ಲದೇ ಹೋದಲ್ಲಿ ಫಿಲ್ಮ್ ಚೇಂಬರ್ ಮೆಟ್ಟಿಲೇರುವುದಾಗಿ ಈ ಹಿಂದೆಯೇ ನಟಿ ಎಚ್ಚರಿಸಿದ್ದರು.