ಸುಪ್ರೀಂನಲ್ಲಿ ದರ್ಶನ್‌ ಪರ ಕಪಿಲ್‌ ಸಿಬಲ್‌ ವಾದ?

Public TV
2 Min Read
darshan and kapil sibal

ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ (Supreme Court) ದರ್ಶನ್‌ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ (Kapil Sibal) ವಾದ ಮಂಡನೆ ಮಾಡುವ ಸಾಧ್ಯತೆಯಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ದರ್ಶನ್‌ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಮಾರ್ಚ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ದರ್ಶನ್‌ ಅವರ ಕಾನೂನು ತಂಡ ಕಪಿಲ್‌ ಸಿಬಲ್‌ ಅವರನ್ನು ಸಂಪರ್ಕಿಸಿದೆ.

ಈಗಾಗಲೇ ಕಪಿಲ್ ಸಿಬಲ್‌ರನ್ನು ಭೇಟಿಯಾಗಿ ಹೈಕೋರ್ಟ್‌ನ ವಾದ ಪ್ರತಿವಾದ, ಕೇಸ್ ಹಿಸ್ಟರಿಯನ್ನು ನೀಡಲಾಗಿದೆ. ಕೋರ್ಟ್‌ ಶುಲ್ಕದ ಬಗ್ಗೆಯೂ ಚರ್ಚೆ ನಡೆದಿದೆ. ದರ್ಶನ್‌ ಪರ ವಾದಕ್ಕೆ ಒಪ್ಪಿಗೆ ನೀಡಿದರೆ ಮಾ.18 ರಂದು ಕಪಿಲ್‌ ಸಿಬಲ್‌ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ದರ್ಶನ್‌ ಪರ ಹಿರಿಯ ವಕೀಲ ಸಿವಿ ನಾಗೇಶ್‌ ವಾದ ಮಂಡಿಸಿದ್ದರು.

ನಟ ದರ್ಶನ್‌, ಅವರ ಆಪ್ತೆ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳಿಗೆ ಡಿಸೆಂಬರ್ 13 ರಂದು ಪೂರ್ಣಾವಧಿಗೆ ಜಾಮೀನು ಮಂಜೂರಾಗಿತ್ತು. ಹೈಕೋರ್ಟ್‌ ತೀರ್ಪನ್ನು ಪ್ರಶ್ನೆ ಮಾಡಿ ಡಿಸೆಂಬರ್‌ ಅಂತ್ಯದಲ್ಲಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ವಕೀಲ ಅನಿಲ್ ನಿಶಾನಿ ಮುಖಾಂತರ ಮೇಲ್ಮನವಿ ಸಲ್ಲಿಸಿರುವ ಸರ್ಕಾರ ಬರೋಬ್ಬರಿ 1,492 ಪುಟಗಳ ಕಡತಗಳನ್ನು ಸಲ್ಲಿಕೆ ಮಾಡಿತ್ತು.

supreme Court 1

ಕಡತದಲ್ಲಿ ಏನಿದೆ?
ಹೈಕೋರ್ಟ್ ಜಾಮೀನು ಆದೇಶ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಮತ್ತು ದೂರಿನ ಪ್ರತಿ, ಮರಣೋತ್ತರ ಪರೀಕ್ಷೆಯ ವರದಿ, ಆರೋಪಿಗಳ ಗ್ರೌಂಡ್ಸ್ ಆಫ್ ಅರೆಸ್ಟ್, ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯ ತರ್ಜುಮೆ ಪ್ರತಿ.

ಪ್ರತ್ಯಕ್ಷ ದರ್ಶಿಗಳ ಹೇಳಿಕೆಯ ತರ್ಜುಮೆ ಕಾಪಿ, ಮರಣೋತ್ತರ ಪರೀಕ್ಷೆಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಸಿಡಿಆರ್, ಪಂಚನಾಮೆ ವರದಿ, ಆರೋಪಿಗಳ ಬಳಿ ವಶಪಡಿಸಿಕೊಂಡ ಡಿಜಿಟಲ್ ವಸ್ತುಗಳ ವಿಶ್ಲೇಷಣೆ ವರದಿ.

ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆದೇಶ ಪ್ರತಿ, ದರ್ಶನ್‌ಗೆ ನೀಡಿದ್ದ ಮಧ್ಯಂತರ ಜಾಮೀನು ಅದೇಶ ಪ್ರತಿ, ಜೈಲಿನಿಂದ ದರ್ಶನ್ ಬಗ್ಗೆ ಸಲ್ಲಿಕೆಯಾದ ವೈದ್ಯಕೀಯ ವರದಿ, ಬಿಜಿಎಸ್ ಆಸ್ಪತ್ರೆ ವೈದ್ಯರ ವರದಿ ಸೇರಿದಂತೆ ಒಟ್ಟು 15 ಅಂಶಗಳಿಗೆ ಸಂಬಂಧಿಸಿ ಒಟ್ಟು 1492 ಪುಟಗಳ ಕಡತವನ್ನು ಕೋರ್ಟ್‌ಗೆ ನೀಡಿದೆ.

ಯಾರೆಲ್ಲಾ ಜಾಮೀನು ರದ್ದಿಗೆ ಅರ್ಜಿ ಸಲ್ಲಿಕೆಯಾಗಿದೆ?
ಪವಿತ್ರಾ ಗೌಡ (ಎ 1)
ದರ್ಶನ್‌ (ಎ 2)
ಜಗದೀಶ್‌ ಜಗ್ಗ ಅಲಿಯಾಸ್‌ ಜಗ್ಗ (ಎ 6)
ಅನುಕುಮಾರ್‌ ಅಲಿಯಾಸ್‌ ಅನು (ಎ 7)
ಆರ್‌ ನಾಗರಾಜು (ಎ 11)
ಎಂ ಲಕ್ಷ್ಮಣ್‌ (ಎ 12)
ಪ್ರದೋಶ್‌  (ಎ 14)

Share This Article