ಬೆಂಗಳೂರು: ಕನಕಪುರದ ಹಾರೋಬೆಲೆಯಲ್ಲಿರುವ ಕಪಾಲ ಬೆಟ್ಟದಲ್ಲಿ ನಿರ್ಮಾಣಕ್ಕೂ ಮುನ್ನ ವಿವಾದ ಸೃಷ್ಟಿಸಿರುವ ಏಸು ಪ್ರತಿಮೆ ಜಾಗದ ಸಂಬಂಧ ವರದಿ ಸದ್ಯದಲ್ಲೇ ಸರ್ಕಾರದ ಕೈ ಸೇರಲಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್, ಏಸು ಪ್ರತಿಮೆ ನಿರ್ಮಿಸಲು ಗೋಮಾಳ ಭೂಮಿ ಕೊಡಲಾಗಿದೆ. ಏಸು ಪ್ರತಿಮೆ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕೊಡಲಾಗಿದೆ. ಜೊತೆಗೆ ಬೋರ್ ವೆಲ್ ಸಹ ಅನುಮತಿ ಪಡೆಯದೇ ತೋಡಿಸಲಾಗಿದೆ. ಪ್ರತಿಮೆ ನಿರ್ಮಿಸುತ್ತಿರುವ ಪ್ರದೇಶಕ್ಕೆ ಸಂಪರ್ಕಿಸಲು ಎರಡು ಕಿ.ಮೀ ರಸ್ತೆಯನ್ನೂ ಸಹ ನಿರ್ಮಿಸಲಾಗಿದೆ. ಇವೆಲ್ಲವೂ ಅನಧಿಕೃತವಾಗಿದೆ. ಹಾಗಾಗಿ ಈ ಕುರಿತು ರಾಮನಗರ ಡಿಸಿ, ಕನಕಪುರ ತಹಶೀಲ್ದಾರ್ ರಿಂದ ವರದಿ ಕೇಳಿದ್ದೇವೆ. ನಿನ್ನೆಯೂ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿ ಮೌಖಿಕ ವಿವರ ಕೊಟ್ರು. ಲಿಖಿತ ರೂಪದ ವರದಿ ಕೊಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಅಂತ ಆರ್ ಅಶೋಕ್ ಹೇಳಿದ್ರು.
ಏಸು ಪ್ರತಿಮೆ ನಿರ್ಮಾಣ ಭೂಮಿ ಕುರಿತು ತಯಾರಾಗುತ್ತಿರುವ ವರದಿ ಅಂತಿಮ ಹಂತದಲ್ಲಿದೆ. ಈ ವಾರದಲ್ಲೇ ಸರ್ಕಾರದ ಕೈಗೆ ರಾಮನಗರದ ಅಧಿಕಾರಿಗಳು ವರದಿ ನೀಡಲಿದ್ದಾರೆ. ವರದಿ ಬಂದ ಬಳಿಕ ಸರ್ಕಾರ ಯಾವ ಕ್ರಮ ಅಂತ ನಿರ್ಧರಿಸಲಿದೆ. ಅಲ್ಲಿಯವರೆಗೂ ಈ ವಿಚಾರದಲ್ಲಿ ಸುಮ್ಮನಿರಲು ಸರ್ಕಾರ ನಿರ್ಧರಿಸಿದೆ.