70ನೇ ರಾಷ್ಟ್ರೀಯ ಚಲನಚಿತ್ರ (70th National Award) ಪ್ರಶಸ್ತಿಗಳು ಘೋಷಣೆ ಆಗಿದ್ದು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ (Rishab Shetty) ಅತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಪ್ರಶಸ್ತಿಯನ್ನು ಪುನೀತ್ ರಾಜ್ಕುಮಾರ್, ದೈವಕ್ಕೆ, ದೈವನರ್ತಕರಿಗೆ ಅರ್ಪಣೆ ಮಾಡುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:70th National Award 2024: ‘ಕಾಂತಾರ’ ಮುಡಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ
ಮೊದಲಿನಿಂದ ನಾನು ಹೇಳಿಕೊಂಡು ಬಂದಿದ್ದೆ, ಈ ಪ್ರಶಸ್ತಿಯನ್ನ ಪುನೀತ್ ರಾಜ್ಕುಮಾರ್, ಕನ್ನಡದ ಜನರಿಗೆ ಮತ್ತು ದೈವನರ್ತಕರಿಗೆ ಅರ್ಪಣೆ ಮಾಡುತ್ತೇನೆ. ಹಾಗೆಯೇ ಹೊಂಬಾಳೆ ಸಂಸ್ಥೆಯ ‘ಕಾಂತಾರ’ ಚಿತ್ರ (Kantara Film) ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಹೊಂಬಾಳೆ ನಿರ್ಮಾಣ ಸಂಸ್ಥೆಗೆ 4 ಪ್ರಶಸ್ತಿಗಳು ಬಂದಿದೆ ಎಂದು ರಿಷಬ್ ಮಾತನಾಡಿದ್ದಾರೆ.
ನಾನು ಸಹ ಅನೌನ್ಸ್ಮೆಂಟ್ ಮಾಡ್ತಿದ್ದನ್ನು ನೋಡುತ್ತಿದ್ದೆ, ಪ್ರಶಸ್ತಿ ಘೋಷಣೆ ಮಾಡಿದಾಗ ಖುಷಿಯಾಯಿತು. ಕನ್ನಡ ಚಿತ್ರರಂಗವು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ. ಹಾಗಾಗಿಯೇ ಇಂದು ಈ ಪ್ರಶಸ್ತಿ ಬಂದಿರೋದು. ಇಡೀ ಚಿತ್ರತಂಡದ ಎಲ್ಲ ಸದಸ್ಯರಿಗೆ ನಾನು ಥ್ಯಾಂಕ್ಸ್ ಹೇಳಬೇಕು. ಡಿಓಪಿಯಾಗಿ ಕೆಲಸ ಮಾಡಿದವರು ಮತ್ತು ಪತ್ನಿ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಈ ಸಕ್ಸಸ್ಗೆ ಅಜಿನೀಶ್ ಲೋಕನಾಥ್ ಸಂಗೀತ ಕೂಡ ಬಹಳ ಮುಖ್ಯವಾಗಿತ್ತು. ಸಿನಿಮಾದ ಎಲ್ಲಾ ನಟ- ನಟಿಯರಿಗೂ, ತಾಂತ್ರಿಕ ವರ್ಗಕ್ಕೂ ಮತ್ತು ಸಿನಿಮಾ ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ ಎಂದು ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
ಜನ ಸಿನಿಮಾ ಮೆಚ್ಚಿದಾಗಲೇ ಜವಾಬ್ದಾರಿ ನಮಗೆ ಹೆಚ್ಚಾಗುತ್ತದೆ. ಪ್ರಶಸ್ತಿ ಬಂದಾಗ ಇನ್ನೂ ಹೆಚ್ಚಾಗುತ್ತದೆ. ನನಗೆ ಅವಾರ್ಡ್ ಬಂದಾಗ ಮೊದಲು ವಿಶ್ ಮಾಡಿದ್ದೆ ಪತ್ನಿ ಪ್ರಗತಿ, ತುಂಬಾ ಖುಷಿಯಾಗಿದ್ದಾರೆ. ಯಶ್ ಸರ್ ಕೂಡ ಕಾಲ್ ಮಾಡಿ ವಿಶ್ ಮಾಡಿದರು. ಮಗಳು ಬಂದಾಗ ಲಕ್ಷ್ಮಿ ಬಂದಿದ್ದಳು ಅಂತ ಎಲ್ಲರೂ ಹೇಳಿದರು. ಈಗ ವರಮಹಾಲಕ್ಷ್ಮಿ ಹಬ್ಬಕ್ಕೆ ಖುಷಿ ಡಬಲ್ ಆಗಿದೆ ಎಂದಿದ್ದಾರೆ.
ಇನ್ನೂ ಹೊಂಬಾಳೆ ಸಂಸ್ಥೆ ನಿರ್ಮಾಣದ ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’, ಮತ್ತು ‘ಕಾಂತಾರ’ (Kantara) ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ ಸಿಕ್ಕಿದೆ. ಜೊತೆಗೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ‘ಕೆಜಿಎಫ್ 2’ಗೆ (KGF 2) ಸಿಕ್ಕಿದೆ.