ರಿಷಬ್ ಶೆಟ್ಟಿ (Rishabh Shetty) ನಿರ್ದೇಶನದ ಕಾಂತಾರ ಸಿನಿಮಾದ ಒಟ್ಟು ಗಳಿಕೆ 200 ಕೋಟಿ ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲೇ ಅದು ನೂರು ಕೋಟಿ ಗಳಿಕೆ ಮಾಡಿದೆ. ಬಾಲಿವುಡ್ ನಲ್ಲೂ ಕಾಂತಾರ (Kantara, )ಹಿಂದೆ ಬಿದ್ದಿಲ್ಲ. ಹಿಂದಿಯಲ್ಲಿ ಈವರೆಗೂ 22.25 ಕೋಟಿ ಹಣ ಹರಿದು ಬಂದಿದೆಯಂತೆ. ಕೆಜಿಎಫ್ 2 ಸಿನಿಮಾದ ನಂತರ ಕನ್ನಡ ಸಿನಿಮಾವೊಂದು ಈ ಪರಿ ಗಳಿಕೆ (Collection)ಮಾಡಿದ ಹೆಗ್ಗಳಿಕೆ ಕಾಂತಾರದ್ದು.
ಒಂದು ಕಡೆ ಬಾಕ್ಸ್ (Box Office) ಆಫೀಸಿನಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಹಿಂದೂ ಸಂಸ್ಕೃತಿಗೆ ಸಂಬಂಧಿಸಿದಂತೆ ಈ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಚೇತನ್ ಮತ್ತು ಬೆಂಬಲಿಗರು ಸಿನಿಮಾದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಹಿಂದೂಪರ ಸಂಘಟನೆಯ ಕಾರ್ಯಕರ್ತರು ಚೇತನ್ ವಿರುದ್ಧ ದಂಗೆ ಎದ್ದಿದ್ದಾರೆ. ಕೆಲವು ಕಡೆ ಚೇತನ್ ಮೇಲೆ ದೂರು ಕೂಡ ದಾಖಲಾಗಿವೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
ಪ್ರಗತಿಪರ ನಟ ಎಂದೇ ಗುರುತಿಸಿಕೊಂಡಿರುವ ಹಾಗೂ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ಕಿಶೋರ್, ಈ ವಿವಾದದ ಕುರಿತು ಭಿನ್ನ ಹೇಳಿಕೆ ನೀಡಿದ್ದಾರೆ. ಎಲ್ಲ ಒಳ್ಳೆಯ ಸಿನಿಮಾಗಳಂತೆ “ಕಾಂತಾರ” ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿ ಹೋದೀತು ಎಂದು ಫೇಸ್ ಬುಕ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
ಅಲ್ಲದೇ, ಕೇವಲ ಓಟಿಗಾಗಿ ಪಟೇಲ್ ಗಾಂಧಿ ಬೋಸ್ ನೆಹ್ರೂ ಸಹಿತ ಕೋಟಿ ಕೋಟಿ ಸ್ವತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ,ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನಒಂದು ಕ್ಷಣ ಯೋಚಿಸಿ. ನಮ್ಮ ಸಿನಿಮಾಗಳು ನಮ್ಮ ಹೆಮ್ಮೆ. ಅವುಗಳನ್ನು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ ಎಂದು ಕಿಶೋರ್ ಸುದೀರ್ಘ ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.