ರಾಮನಗರ: ಮಾಗಡಿ (Magadi) ತಾಲೂಕಿನ ಬಂಡೆ ಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Shree) ಆತ್ಮಹತ್ಯೆ ಪ್ರಕರಣವು ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಬಂಡೆ ಸ್ವಾಮೀಜಿ ತಮಗಿಂತಲೂ ಎತ್ತರಕ್ಕೆ ಬೆಳೆದಿದ್ದಾರೆ ಎಂಬ ಹೊಟ್ಟೆಕಿಚ್ಚು ತಾಳಲಾರದೇ ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ಗೆ ಯೋಜಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಬಸವಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಸ್ವಾಮೀಜಿ ಸಹೋದರ ಸಂಬಂಧಿಗಳಾಗಿದ್ದು, ದೊಡ್ಡಪ್ಪ, ಚಿಕ್ಕಪ್ಪ ಮಕ್ಕಳಾಗಿದ್ದರು. ಆದರೆ ಬಂಡೆ ಸ್ವಾಮೀಜಿಗಳು ದಿನದಿಂದ ದಿನಕ್ಕೆ ಪ್ರಖ್ಯಾತಿಯನ್ನು ಪಡೆಯುತ್ತಿದ್ದದ್ದನ್ನು ನೋಡಿ ಕಣ್ಣೂರು ಶ್ರೀಗೆ ಹೊಟ್ಟೆಕಿಚ್ಚು ತರಿಸಿತ್ತು. ಈ ಹಿನ್ನೆಲೆಯಲ್ಲಿ ಕಣ್ಣೂರು ಮೃತ್ಯುಂಜಯ ಶ್ರೀ, ಬಂಡೇಮಠದ ಬಸವಲಿಂಗ ಸ್ವಾಮೀಜಿಯನ್ನು ಹೀಗೆ ಬಿಟ್ಟರೆ ನಮಗೆ ಉಳಿಗಾಲ ಇಲ್ಲ ಎಂದು ಇವರಿಗೆ ಖೆಡ್ಡ ತೋಡಲೇಬೇಕು ಎಂದು ನಿರ್ಧರಿಸಿದ್ದರು. ಇದರಿಂದಾಗಿಯೇ ಬಸವಲಿಂಗ ಸ್ವಾಮೀಜಿಯನ್ನು ಹನಿಟ್ರ್ಯಾಪ್ನಲ್ಲಿ ಸಿಕ್ಕಿ ಹಾಕಿಸಬೇಕು ಎಂದು ಯೋಜಿಸಿದರು. ಅದೇ ಸಮಯಕ್ಕೆ ಸ್ಥಳೀಯ ಮುಖಂಡ ಮಹದೇವಯ್ಯನ ಮೂಲಕ ನೀಲಾಂಬಿಕೆ, ಕಣ್ಣೂರು ಶ್ರೀಗಳಿಗೆ ಪರಿಚಯವಾಗಿದ್ದಳು.
ಅದಾದ ಬಳಿಕ ನೀಲಾಂಬಿಕೆ ತಾನು ಹೇಳಿದಂತೆ ಕೇಳುತ್ತಾಳೆ ಎನ್ನುವುದು ತಿಳಿಯುತ್ತಿದ್ದಂತೆ ಬಂಡೆಮಠದ ಶ್ರೀಗಳನ್ನು ಸಿಕ್ಕಿ ಹಾಕಿಸಲು ಕಣ್ಣೂರು ಶ್ರೀ ತಂತ್ರ ಹೂಡಿದ್ದಾರೆ. ಇದಾದ ಬಳಿಕ ಯುವತಿ ಬಂಡೆಮಠದ ಶ್ರೀಗಳ ಪರಿಚಯ ಮಾಡಿಕೊಂಡಿದ್ದಾಳೆ. ಸಲುಗೆ ಜಾಸ್ತಿ ಆಗುತ್ತಿದ್ದಂತೆ ಬಂಡೆ ಮಠದ ಶ್ರೀಗಳನ್ನು ತನ್ನ ತಾಳಕ್ಕೆ ತಕ್ಕಂತೆ ನೀಲಾಂಬಿಕಾ ಕುಣಿಸಿದ್ದಾಳೆ. ಅದಾದ ಬಳಿಕ ಬಂಡೆ ಶ್ರೀಗಳು ಕಾಲ್ ಮಾಡುವ ಬಗ್ಗೆ ಕಣ್ಣೂರು ಶ್ರೀ ಬಳಿ ನೀಲಾಂಬಿಕೆ ಹೇಳಿದ್ದಳು. ಆಗ ಕಣ್ಣೂರು ಶ್ರೀಗಳು, ನಿಲಾಂಬಿಕಾ ಬಳಿ ವೀಡಿಯೋ ಮಾಡ್ಕೊ ಅವರನ್ನ ಮಠದಿಂದ ಓಡಿಸಬೇಕು ಎಂದಿದ್ದರು.
ಕಣ್ಣೂರು ಶ್ರೀ ಅಣತಿಯಂತೆ ಬಸವಲಿಂಗ ಶ್ರೀಗಳ ಜೊತೆ ನಿಲಾಂಬಿಕೆ ವೀಡಿಯೋ ಚಾಟ್ ಆರಂಭಿಸಿದ್ದು, ಅಲ್ಲದೇ ಚಾಟಿಂಗ್ ವೇಳೆ ನಗ್ನವಾಗುವಂತೆ ಹೇಳಿದ್ದಾಳೆ. ಆಕೆಯ ವೈಯ್ಯಾರದ ಮಾತಿಗೆ ಮರುಳಾದ ಶ್ರೀ ನಗ್ನವಾಗಿದ್ದಾರೆ. ಈ ಸಂದರ್ಭದಲ್ಲಿ ವೀಡಿಯೋ ಕರೆಗಳನ್ನು ಆಕೆ ರೆಕಾರ್ಡ್ ಮಾಡುತ್ತಿದ್ದಳು. ನಿಲಾಂಬಿಕೆ ಮೂರು ವೀಡಿಯೋ ಮಾಡಿಟ್ಟುಕೊಂಡು ಮಹದೇವಯ್ಯನಿಗೆ ನೀಡಿದ್ದಳು. ಅದಾದ ಬಳಿಕ ಮಹದೇವಯ್ಯ ವೀಡಿಯೋ ಎಡಿಟ್ ಮಾಡಿ ಬಂಡೆ ಶ್ರೀಗಳಿಗೆ ತೋರಿಸಿ ಬೆದರಿಕೆ ಹಾಕಿದ್ದ ಎನ್ನುವುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಂಡೆ ಶ್ರೀಗೆ ಖೆಡ್ಡಾ ತೋಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅರೆಸ್ಟ್
ಬಂಧನಕ್ಕೆ ಒಳಗಾಗಿರುವ ಕಣ್ಣೂರು ಮೃತ್ಯುಂಜಯ ಸ್ವಾಮೀಜಿಗೆ ರಾಮನಗರ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಕೇಸ್ – ಕಣ್ಣೂರು ಶ್ರೀ, ಯುವತಿ ಅರೆಸ್ಟ್