ಬೆಂಗಳೂರು: ಸಮುದ್ರದ ಮಧ್ಯೆ ಬೋಟ್ ಕೆಟ್ಟುನಿಂತ ಪರಿಣಾಮವಾಗಿ ಸತತ ನಾಲ್ಕು ಗಂಟೆಗಳ ಕಾಲ ಸಹಾಯಕ್ಕಾಗಿ ಕಾದು ನಿಂತಿದ್ದ ಕನ್ನಡಿಗರನ್ನು ರಕ್ಷಣೆ ಮಾಡಿರುವ ಘಟನೆ ಗೋವಾದ ರಾಯಬಾಗ್ ಪ್ರದೇಶದಲ್ಲಿ ನಡೆದಿದೆ.
ನಗರದ ಪೀಣ್ಯ ಪ್ರದೇಶದಿಂದ ಸುಮಾರು 47 ಕನ್ನಡಿಗರು ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಮುದ್ರವನ್ನು ನೋಡಲು ಗೋವಾದ ಪಣಜಿಯ ರಾಯಬಾಗ್ ನ ಸಮುದ್ರಕ್ಕೆ ಬೋಟ್ ನಲ್ಲಿ ಹೋಗುತ್ತಿದ್ದಾಗ ಪ್ರಯಾಣದ ಮಧ್ಯೆ ಕೆಟ್ಟು ನಿಂತಿದೆ.
ಈ ಸಂದರ್ಭದಲ್ಲಿ ಎರಡು ಗಂಟೆಗಳಾದರೂ ಅಲ್ಲಿನ ಸಿಬ್ಬಂದಿ ನೆರವಿಗೆ ಬಾರದೇ ಇದ್ದ ಕಾರಣ ಪ್ರವಾಸಿಗರಲ್ಲಿ ಹೆದರಿಕೆ ಆರಂಭವಾಗಿದೆ. ಬೋಟ್ ನಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಅತಂಕ ಹೆಚ್ಚಳವಾಗಿದೆ. ಅಲ್ಲದೇ ಸಂಜೆಯಾಗುತ್ತಿದ್ದಂತೆ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಿದ್ದು, ಅಲೆಗಳ ವೇಗಕ್ಕೆ ಬೇಟ್ ಅಲುಗಾಡತೊಡಗಿ ಚಲಿಸುತ್ತಿದ್ದ ಕಾರಣ ಮತ್ತಷ್ಟು ಅತಂಕ ಉಂಟಾಗಿತ್ತು.
ಸುಮಾರು ನಾಲ್ಕೂವರೆ ಗಂಟೆಗಳ ಬಳಿಕ ಆ ಪ್ರದೇಶಕ್ಕೆ ತೆರಳಿದ ಮತ್ತೊಂದು ಬೋಟ್ ನಲ್ಲಿದ್ದ ಕನ್ನಡಿಗರು ಇವರ ಧ್ವನಿ ಕೇಳಿ ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ.