ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ

Public TV
1 Min Read
Kannadigas

ಬೆಂಗಳೂರು: ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತ (Odisha Train Accident) ಸಂಚಲನ ಸೃಷ್ಟಿಸಿದ್ದು, ಅಪಘಾತಕ್ಕೀಡಾದ ಮೂರು ರೈಲುಗಳ ಪೈಕಿ ಒಂದರಲ್ಲಿ ಪ್ರಯಾಣಿಸುತ್ತಿದ್ದ ಕನ್ನಡಿಗರು ಸೇಫ್ ಆಗಿದ್ದಾರೆ.

ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಕಳಸಾದಿಂದ ಪ್ರವಾಸಕ್ಕೆ ಹೊರಟಿದ್ದವರಿಂದ (Kalasa Tourists) ವೀಡಿಯೋ ಒಂದು ಬಿಡುಗಡೆಯಾಗಿದೆ. ಅಪಘಾತ ನಡೆದ ರೈಲಿನಲ್ಲಿಯೇ ಸಂಚಾರ ಮಾಡ್ತಿದ್ದ ಕನ್ನಡಿಗರು ತಾವು ಸೇಫ್ ಆಗಿದ್ದೇವೆ ಎಂದು ಹೇಳಿಕೊಂಡಿದ್ದು, ಟ್ರೇನ್‌ನಲ್ಲೇ ವೀಡಿಯೋ ಮಾಡಿ ದುರಂತದ ಘನಘೋರ ದೃಶ್ಯವನ್ನು ಬಿಚ್ಚಿಟ್ಟಿದ್ದಾರೆ.

Balasore Train Accident 2

ಹೆಸರು ಹೇಳದ ಪ್ರವಾಸಿಗರೊಬ್ಬರು, ನಾವು ಕಳಸಾದಿಂದ ಪ್ರವಾಸ ಹೊರಟಿದ್ದೆವು. ಇನ್ನೇನು ಒಡಿಶಾ ಗಡಿ ದಾಟಿ, ಕೋಲ್ಕತ್ತಾಗೆ ತಲುಪಬೇಕು ಎನ್ನುವಷ್ಟರಲ್ಲೇ ದೊಡ್ಡಮಟ್ಟದ ಸದ್ದು ಕೇಳಿಬಂತು. ತಕ್ಷಣಕ್ಕೆ ಏನಾಯ್ತು ಎಂದು ನೋಡಿದಾಗ ರೈಲು ಅಪಘಾತವಾಗಿರುವುದು ಕಂಡುಬಂದಿತು. ಸಮೀಪಕ್ಕೆ ಹೋಗಿ ನೋಡಿದಾಗ ನಮ್ಮ ರೈಲಿನಲ್ಲೇ ರಿಸರ್ವ್ S5 ಮತ್ತು ಇನ್ನುಳಿದ 2 ಜನರಲ್ ಬೋಗಿಗಳಿಗೆ ಹಾನಿಯಾಗಿತ್ತು. ಕೆಲವರು ತೀವ್ರವಾಗಿ ಗಾಯಗೊಂಡಿದ್ದರು, ಕೆಲವರು ಮೃತಪಟ್ಟಿದ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತ ಹೇಗಾಯ್ತು..? ಘಟನೆಗೆ ಕಾರಣ ಏನು..?

Balasore Train Accident

ರಾತ್ರಿ ಸುಮಾರು 8:30ರ ವೇಳೆಗೆ ರೈಲು ಅಪಘಾತ ನಡೆದಿತ್ತು. ಬಳಿಕ ಅಲ್ಲಿಗೆ ಧಾವಿಸಿದ ಸ್ಥಳೀಯ ಜಿಲ್ಲಾಧಿಕಾರಿಗಳು ನಮಗೆ ಪರ್ಯಾಯ ರೈಲು ವ್ಯವಸ್ಥೆ ಮಾಡಿಕೊಟ್ಟರು. ನಾವು ಸೇಫ್ ಆಗಿದ್ದೇವೆ. ಉಳಿದವರೂ ಸೇಫ್ ಆಗಬೇಕಿತ್ತು. ಇದು ಅಚಾನಕ್ಕಾಗಿ ನಡೆದಿರುವ ಘಟನೆ. ಸದ್ಯ ನಮ್ಮ ಪ್ರಯಾಣ ಮುಂದುವರಿಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದಿಂದ ಸೇಫ್ ಆಗಿಯೇ ಹಿಂದಿರುಗಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Odisha Train Tragedy; ಪುಣ್ಯಕ್ಷೇತ್ರಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 110 ಮಂದಿ ಯಾತ್ರಾರ್ಥಿಗಳು ಸೇಫ್

ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ ರೈಲು ದುರಂತದಲ್ಲಿ 233 ಮಂದಿ ಬಲಿಯಾಗಿದ್ದು, ಗಾಯಗೊಂಡವರ ಸಂಖ್ಯೆ 900ಕ್ಕೆ ಏರಿದೆ.

Share This Article