ಚಿಕ್ಕಬಳ್ಳಾಪುರ: ಫೋನಿ ಚಂಡಮಾರುತದ ಅಬ್ಬರಕ್ಕೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ 70 ಮಂದಿ ಕನ್ನಡಿಗರು ಪರದಾಡುವಂತಾಗಿದೆ.
ಏಪ್ರಿಲ್ 29ರಂದು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಮೂಲೆಗಳಿಂದ ಅಂಡಮಾನ್- ನಿಕೋಬಾರ್ ದ್ವೀಪಕ್ಕೆ ಪ್ರವಾಸ ಕೈಗೊಂಡಿದ್ದರು. ಆದರೆ ಪ್ರವಾಸ ಮುಗಿಸಿ ಇಂದು ವಾಪಾಸ್ಸಾಗಲು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಯಲ್ಲಿ ಟಿಕೆಟ್ ಸಹ ಬುಕ್ ಮಾಡಿದ್ದರು.
ಫೋನಿ ಸೈಕ್ಲೋನ್ ಭೀತಿಯಿಂದ ಅಂಡಮಾನ್ – ನಿಕೋಬಾರ್ ನ ಪೋರ್ಟ್ ಬ್ಲೇರ್ ನ ವೀರ ಸಾವರ್ಕರ್ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ರದ್ದುಪಡಿಸಲಾಗಿದೆ. ಹೀಗಾಗಿ ಕರ್ನಾಟಕಕ್ಕೆ ವಾಪಾಸ್ಸಾಗಲು ಬೇರೆ ದಾರಿ ಕಾಣದ ಕನ್ನಡಿಗರು ಪರದಾಡುತ್ತಿದ್ದಾರೆ.
ಸದ್ಯ ಪೋರ್ಟ್ ಬ್ಲೇರ್ ಏರ್ ಪೋರ್ಟ್ ನಲ್ಲಿ ಕಾಲ ಕಳೆಯುತ್ತಿರುವ ಕನ್ನಡಿಗರಿಗೆ ಉಳಿದುಕೊಳ್ಳಲು ಸಹ ಬೇರೆ ದಾರಿ ಇಲ್ಲವಾಗಿದೆ. 70 ಮಂದಿಯಲ್ಲಿ ವೃದ್ಧರು ಮಕ್ಕಳು ಸಹ ಇದ್ದು ಊಟ ತಿಂಡಿಗೂ ಕಷ್ಟಪಡುವಂತಾಗ್ತಿದೆ. ರಾಜ್ಯ ಸರ್ಕಾರ ಸಹಾಯಕ್ಕೆ ಧಾವಿಸುವಂತೆ ಪಬ್ಲಿಕ್ ಟಿವಿಗೆ ಕರೆ ಮಾಡಿ ಕನ್ನಡಿಗರು ಮನವಿ ಮಾಡಿಕೊಂಡಿದ್ದಾರೆ.