-ಮಹಿಳೆ ರಕ್ಷಿಸಲು ಹೋಗಿ ಧನುಷ್ ರೆಡ್ಡಿ ಸಾವು
ಚಿಕ್ಕಬಳ್ಳಾಪುರ: ಅಮೇರಿಕದಲ್ಲಿ ಭಾರೀ ಪ್ರಮಾಣದ ಮಳೆಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ಕನ್ನಡಿಗರೊಬ್ಬರು ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಅಮೇರಿಕದ ಸುದ್ದಿ ಸಂಸ್ಥೆಯೊಂದು ಪ್ರಕಟ ಮಾಡಿದ್ದು, ಈ ವಿಷಾದನೀಯ ಸುದ್ದಿಯನ್ನು ಕುಟುಂಬಸ್ಥರು ಸಹ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೊಮ್ಮೆಪಲ್ಲಿ ನಿವಾಸಿ ಧನುಷ್ ರೆಡ್ಡಿ(31) ಮೃತ ವ್ಯಕ್ತಿ. ಕಳೆದ ಬುಧವಾರ ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯ ಆರ್ತನಾದ ಕೇಳಿ ರಕ್ಷಿಸಲು ಮುಂದಾದ ಧನುಷ್ ರೆಡ್ಡಿ ಪ್ರವಾಹದ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಬೃಹತ್ ಗಾತ್ರದ ಪೈಪ್ ಲೈನ್ನಲ್ಲಿ ಕೊಚ್ಚಿ ಹೋದ ಧನುಷ್ ರೆಡ್ಡಿ ಮೃತ ದೇಹ ಒಂದು ದಿನದ ನಂತರ ಅಂದರೆ ಗುರುವಾರ ಪತ್ತೆಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಗೆ ಮುಂದಾದ ಎಲ್.ಆರ್.ಶಿವರಾಮೇಗೌಡ ಪುತ್ರ
ಕಳೆದ 7-8 ವರ್ಷಗಳಿಂದ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಧನುಷ್ ರೆಡ್ಡಿ ಅಮೇರಿಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ನಿವೃತ್ತ ಉಪನ್ಯಾಸಕಿ ವಿಜಯಲಕ್ಷ್ಮೀ ಹಾಗೂ ರಕ್ಷಣಾ ಇಲಾಖೆಯಲ್ಲಿ ಆಡಿಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಾಗರಾಜ್ರವರ ಪುತ್ರರಾಗಿದ್ದಾರೆ. ಇನ್ನೂ ಧನುಷ್ ರೆಡ್ಡಿಯವರ ತಂಗಿ ಸಹ ಕಳೆದ 3-4 ತಿಂಗಳ ಹಿಂದೆಯಷ್ಟೇ ಅಮೇರಿಕದಲ್ಲಿ ಕೆಲಸ ಮಾಡಲು ತೆರಳಿದ್ದಾರೆ. ಅಮೇರಿಕದ ಸುದ್ದಿ ಸಂಸ್ಥೆಯೊಂದು ಈ ಸುದ್ದಿಯನ್ನು ಪ್ರಕಟ ಮಾಡಿದ್ದು, ಅಮೇರಿಕದಲ್ಲಿ ಭಾರೀ ಮಳೆ ಪ್ರವಾಹಕ್ಕೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ತಲೈವಿ ರಿಲೀಸ್ಗೂ ಮುನ್ನ ಜಯಲಲಿತಾ ಸಮಾಧಿಗೆ ಕಂಗನಾ ಭೇಟಿ
ಸದ್ಯ ಮೃತ ಧನುಷ್ ರೆಡ್ಡಿ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು ಸರ್ಕಾರ ಸಹಾಯಹಸ್ತ ಚಾಚಬೇಕಾಗಿ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.