ಉಡುಪಿ: ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗಿಲ್ಲ ಎಂದು ವಿಶ್ವಾಸದಿಂದ ಹೇಳಬಲ್ಲೆ. ಈ ಬಾರಿ ಪ್ರಶಸ್ತಿ ಸಾಧಕರನ್ನು ಹುಡುಕಿಕೊಂಡು ಬಂದಿದೆ. ಸಣ್ಣಪುಟ್ಟ ನಿಯಮಾವಳಿಗಳ ಬದಲಾವಣೆಯಾಗಬೇಕು ಅನಿಸುತ್ತಿದೆ. ಮುಂದಿನ ವರ್ಷ ರಾಜ್ಯಕ್ಕೆ ಏಕರೂಪ ನಿಯಮ ಜಾರಿ ಮಾಡತ್ತೇವೆ ಎಂದು ಕನ್ನಡ ಸಂಸ್ಕೃತಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಸಂದರ್ಭ ಸುಗಮ ಸಂಗೀತ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂಬ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ನ್ಯಾಯ ಕೊಡಲು ಆಗಿಲ್ಲ ಅನ್ನೋದನ್ನು ಒಪ್ಪಿಕೊಳ್ಳುತ್ತೇನೆ. ಸೀಮಿತವಾದ ಅವಕಾಶದಲ್ಲಿ 66 ಜನ ಆಯ್ಕೆ ಮಾಡಿದ್ದೇವೆ. ಒಂದೇ ಬಾರಿ ಎಲ್ಲರನ್ನೂ ಆಯ್ಕೆ ಮಾಡುವುದು ಕಷ್ಟಸಾಧ್ಯ. ಮುಂದಿನ ವರ್ಷ ಇನ್ನಷ್ಟು ಒಳ್ಳೆಯ ಸಾಧಕರನ್ನು ಗುರುತಿಸುತ್ತೇವೆ. ಸಿಎಂ ಜೊತೆ ಚರ್ಚಿಸಿ ನಿಯಮಾವಳಿಗಳಲ್ಲಿ ಬದಲಾವಣೆ ತಂದು ರಾಜ್ಯಕ್ಕೆ ಏಕರೂಪ ನಿಯಮ ಜಾರಿ ಮಾಡತ್ತೇವೆ ಎಂದರು. ಇದನ್ನೂ ಓದಿ: ಜನಸೇವಕ, ಜನಸ್ಪಂದನದಿಂದ ಜನಸ್ನೇಹಿ ಆಡಳಿತ: ಬೊಮ್ಮಾಯಿ
ಈ ಮೊದಲು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಭವ್ಯ ವೇದಿಕೆಯಲ್ಲಿ 66 ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಕನ್ನಡ ಸಚಿವರು ತಾಯಿ ಭುವನೇಶ್ವರಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪೊಲೀಸ್ ಮತ್ತಿತರ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಜಿಲ್ಲಾಡಳಿತದಿಂದ ನಡೆದ ಈ ಅಪೂರ್ವ ಕಾರ್ಯಕ್ರಮಕ್ಕೆ ಅಧಿಕಾರಿ ವರ್ಗ ವಿದ್ಯಾರ್ಥಿಗಳು, ಸಾರ್ವಜನಿಕರು ಸಾಕ್ಷಿಯಾದರು. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು
ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮತ್ತು ಪಥಸಂಚಲನದ ಕಾರ್ಯಕ್ರಮದ ಬಳಿಕ ಅಭೂತಪೂರ್ವ ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದು ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ. ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರ ನಾಯಕ್, ರಾಘವೇಂದ್ರ ಕಿಣಿ, ಪ್ರಭಾರ ಜಿಲ್ಲಾಧಿಕಾರಿ ನವೀನ್ ಭಟ್ ಅಧಿಕಾರಿಗಳು ಮತ್ತು ನೆರೆದ ಜನಸ್ತೋಮ ಚಿಣ್ಣರ ನಾಡು ನುಡಿಯ ಗರಿಮೆ ಸಾರುವ ಹಾಡಿಗೆ ಹಾಕಿದ ಹೆಜ್ಜೆಗೆ ಮನಸೋತರು.