ಚಾಮರಾಜನಗರ: ಗಡಿನಾಡು ಚಾಮರಾಜನರದ ದೇವಸ್ಥಾನಗಳಲ್ಲಿ ಇನ್ಮುಂದೆ ಕನ್ನಡ ಡಿಂಡಿಮ ಮೊಳಗಲಿದೆ. ಯಾರಿಗೂ ಅರ್ಥವಾಗದ ಸಂಸ್ಕೃತದ ಮಂತ್ರಘೋಷಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇನ್ನೇನಿದ್ದರೂ ಕನ್ನಡದಲ್ಲೇ ದೇವರಿಗೆ ಭಕ್ತಿಭಾವ ಸಮರ್ಪಿಸಿ ಎಂಬ ಹೊಸ ಆದೇಶವನ್ನು ಜಿಲ್ಲಾಡಳಿತ ನೀಡಿದೆ.
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಮಂತ್ರಪಠಣ, ಅರ್ಚನೆ, ಸಂಕಲ್ಪ, ವಿವಿಧ ಪೂಜಾ ಕೈಂಕರ್ಯಗಳನ್ನು ಸಂಸ್ಕೃತದಲ್ಲೇ ನೆರವೇರಿಸಲಾಗುತ್ತೆ. ಆದರೆ ದೇವಸ್ಥಾನಕ್ಕೆ ಹೋಗುವ ಶೇ.99 ರಷ್ಟು ಮಂದಿಗೆ ಸಂಸ್ಕೃತ ಬರೋದಿಲ್ಲ, ಅದು ನಮ್ಮ ವ್ಯವಹಾರಿಕ ಭಾಷೆಯೂ ಅಲ್ಲ. ಹಾಗಾಗಿ ಅರ್ಚಕರು ಹೇಳುವ ಮಂತ್ರವಾಗಲಿ, ಭಕ್ತರ ಪರವಾಗಿ ಮಾಡುವ ಸಂಕಲ್ಪವಾಗಲಿ, ಅರ್ಚನೆಯಾಗಲಿ, ಶ್ಲೋಕಗಳಾಗಲಿ ಅರ್ಥವೇ ಆಗುವುದಿಲ್ಲ.
ಪೂಜಾರಿಗಳು ಮಾಡುವ ಅರ್ಚನೆ, ಮಂತ್ರ ಸುಲಭವಾಗಿ ಅರ್ಥವಾಗಬೇಕು ಎಂಬ ಉದ್ದೇಶದಿಂದ ಚಾಮರಾಜನಗರ ಜಿಲ್ಲಾಡಳಿತ ಹೊಸ ಆದೇಶವನ್ನು ಹೊರಡಿಸಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ಇನ್ಮುಂದೆ ಕನ್ನಡದಲ್ಲೇ ಮಂತ್ರೊಚ್ಛಾರಣೆ ಮಾಡಬೇಕು. ಸಂಪ್ರದಾಯ ಹಾಗೂ ಧಾರ್ಮಿಕ ಪದ್ಧತಿಗಳಿಗೆ ಧಕ್ಕೆ ಬಾರದಂತೆ ಕನ್ನಡದಲ್ಲಿಯೇ ಮಂತ್ರ ಪಠಿಸಬೇಕು ಎಂದು ಡಿಸಿ ಡಾ.ಎಂ.ಆರ್. ರವಿ ಸೂಚಿಸಿದ್ದಾರೆ.
ಕನ್ನಡದಲ್ಲಿ ಮಂತ್ರಪಠಣಕ್ಕಾಗಿ ಕನ್ನಡ ಪಂಡಿತರ ಅರ್ಚಕರಿಗೆ ವಿಶೇಷ ಟ್ರೈನಿಂಗ್ ಕೊಡಿಸಲು ಸಹ ಜಿಲ್ಲಾಡಳಿತ ತೀರ್ಮಾನಿಸಿದೆ. ಇದನ್ನು ಅರ್ಚಕರು ಸಹ ಸ್ವಾಗತಿಸಿದ್ದಾರೆ. ಮಂತ್ರ, ಶ್ಲೋಕ ಹಾಗೂ ಪೂಜಾ ವಿಧಿವಿಧಾನಗಳನ್ನು ಕನ್ನಡದಲ್ಲೇ ಮುದ್ರಿಸಿ ಪುಸ್ತಕ ರೂಪದಲ್ಲಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ 281 ದೇವಸ್ಥಾನಗಳಿದ್ದು, ಅಲ್ಲೆಲ್ಲಾ ಕನ್ನಡದ ಕಂಪು ಪಸರಿಸಲಿದೆ. ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಭಕ್ತರ ಪ್ರಶಂಸೆಗೂ ಪಾತ್ರವಾಗಿದೆ.