ಬೆಂಗಳೂರು: ರಂಗಿತರಂಗ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿ ಬಂದಿರುವ ರಾಜರಾಥ ಸಿನಿಮಾ ಇದೇ ಶುಕ್ರವಾರ ಅಂದರೆ ಮಾರ್ಚ್ 23ರಂದು ತೆರೆಕಾಣಲಿದೆ.
ವಿಭಿನ್ನ ಕಥಾ ಹಂದರವುಳ್ಳ ರಂಗಿತರಂಗ ಸಿನಿಮಾ ನೀಡಿದ ಬಳಿಕ ಅನೂಪ್ ಭಂಡಾರಿ ರಾಜರಥದಲ್ಲಿ ಸಾಗುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿನಿಮಾ ಮೂಡಿದ್ದು, ನಿರೂಪ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ನಿರೂಪ್ ಗೆ ಜೊತೆಯಾಗಿ ನಟಿ ಆವಂತಿಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನೂ ತಮಿಳು ನಟ ಆರ್ಯ, ರವಿಶಂಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ರಾಜರಥ ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಗಾಂಧಿನಗರದಲ್ಲಿ ಭರವಸೆಯನ್ನು ಮೂಡಿಸಿದೆ. ಕಾಲೇಜು, ಸ್ವೀಟ್ ಲವ್ ಸ್ಟೋರಿಯನ್ನು ಸಿನಿಮಾ ಕಥೆ ಎಂಬುದನ್ನು ಹಾಡುಗಳು ಈಗಾಗಲೇ ಹೇಳ್ತಿವೆ. ಆದ್ರೆ ಚಿತ್ರದ ಸಂಪೂರ್ಣ ಕಥಾ ಹಂದರವನ್ನು ಎಲ್ಲಿಯೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಹಿಂದೆ ಅನೂಪ್ ಭಂಡಾರಿ ರಂಗಿತರಂಗ ಸಿನಿಮಾದಲ್ಲಿ ನೋಡುಗರನ್ನು ಕೊನೆಯವರೆಗೂ ಹಿಡಿದಿಟ್ಟಿಕೊಂಡಿದ್ದರು. ಇದನ್ನೂ ಓದಿ: ಮತ್ತೆ ಬರ್ತಿದೆ ರಂಗಿತರಂಗ ಜೋಡಿ- ಇದು ಅವರ ಕಥೆಯಲ್ಲ, ನನ್ನ ಕಥೆ ಅಂತಿದೆ ರಾಜರಥ ನೋಡಿ
ಸಿನಿಮಾದ ಕಥೆ ಕಣ್ಣಮುಂದೆಯೇ ಬರುವಂತೆ ಚಿತ್ರೀಕರಿಸಲಾಗಿದೆ. ಜನರು ಏನು ನೋಡಬೇಕೆಂದು ಥಿಯೇಟರ್ ಗೆ ಬರುತ್ತಾರೆ ಅದಕ್ಕಿಂತ ಹೆಚ್ಚಿನದನ್ನು ರಾಜರಥ ನೀಡಲಿದೆ. ಒಂದು ಸಿನಿಮಾ ಯಶಸ್ಸಿನ ಬಳಿಕ ಅಂತಹ ಚಿತ್ರವನ್ನು ಮಾಡಬೇಕೆಂದು ಮಾಡಿಲ್ಲ. ಇದು ರಂಗಿತರಂಗ ಚಿತ್ರಕ್ಕಿಂತ ವಿಭಿನ್ನವಾದ ಹೊಸತನದ ಕಥೆಯನ್ನು ಹೊಂದಿದೆ. ಈ ಹಿಂದೆ ಸರಳ ಹುಡಗನಾಗಿ ಕಾಣಿಸಿದ್ದ ನಿರೂಪ್ ಈ ಬಾರಿ ತರಲೆ ಕಾಲೇಜು ಹುಡಗನಾಗಿ ವಿಭಿನ್ನ ಲುಕ್ ನಲ್ಲಿ ಮಿಂಚಿದ್ದಾರೆ ಅಂತಾ ಚಿತ್ರತಂಡ ತಿಳಿಸಿದೆ.
ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತವನ್ನು ಚಿತ್ರ ಹೊಂದಿದೆ. ಜಾನಿ ಮಾಸ್ಟರ್ ಮತ್ತು ಬೋಸ್ಕೋ ಕೇಸರ್ ಕ್ಯಾಮೆರಾ ಕಾರ್ಯ ನಿರ್ವಹಿಸಿದ್ದಾರೆ. ಮೊದಲ ಟ್ರೇಲರ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಿನ್ನೆಲೆ ಧ್ವನಿಯಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಕನ್ನಡ ಮತ್ತು ತೆಲಗುವಿನಲ್ಲಿಯೂ ಮೂಡಿಬಂದಿದೆ.