ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರ ನಿರ್ಮಾಪಕ, ವಿತರಕ, ಪ್ರದರ್ಶಕ ಎಂ. ಭಕ್ತವತ್ಸಲಂ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
1971ರಲ್ಲಿ ಸಂಪೂರ್ಣ ರಾಮಾಯಣ ಸಿನಿಮಾ ನಿರ್ಮಾಣ ಮಾಡಿದ್ದ ಇವರು, ಕನ್ನೇಶ್ವರರಾಮ ಸೇರಿದಂತೆ ಹಲವು ಯಶಸ್ವಿ ಸಿನಿಮಾಗನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ನಿರ್ಮಾಪಕರಾಗಿ, ವಿತರಕರಾಗಿ, ಪ್ರದರ್ಶಕರಾಗಿ ಭಕ್ತವತ್ಸಲಂ ಗುರುತಿಸಿಕೊಂಡಿದ್ದರು.
ಭಕ್ತವತ್ಸಲಂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುಮಾರು 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸೌತ್ ಇಂಡಿಯಾ ಫಿಲಂ ಚೇಂಬರ್ ಅಧ್ಯಕ್ಷ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೆ ಫಿಲಂ ಫೆಡರೇಷನ್ ಇಂಡಿಯಾಗೆ ಆಯ್ಕೆಯಾದ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆ ಭಕ್ತವತ್ಸಲಂ ಅವರಿಗೆ ಸಲ್ಲುತ್ತದೆ.
ಕನ್ನಡ ಚಿತ್ರರಂಗದಲ್ಲಿ ಇವರು ಮಾಡಿದ ಸಾಧನೆ ಗುರುತಿಸಿ 2012ರಲ್ಲಿ ಡಾ.ರಾಜ್ಕುಮಾರ್ ಪ್ರಶಸ್ತಿಯನ್ನು ನೀಡಲಾಗಿತ್ತು. ಭಕ್ತವತ್ಸಲಂ ಅವರು ಬೆಂಗಳೂರಿನ ಶಾರದಾ, ಮಿನರ್ವ, ಲಾವಣ್ಯ ಹಾಗೂ ಮೈಸೂರಿನ ಲಕ್ಷ್ಮಿ ಚಿತ್ರಮಂದಿರಗಳ ಮಾಲೀಕರಾಗಿದ್ದರು.