ಬೆಂಗಳೂರು: ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಯಾವ ನೆರಳೂ ಇಲ್ಲದಂಥಾ ಶೈಲಿಯಲ್ಲಿ ದೃಶ್ಯ ಕಟ್ಟೋದು ನಿರ್ದೇಶಕನೊಬ್ಬನ ಅಸಲಿ ಕಸುಬುದಾರಿಕೆ. ಹಾಗೆ ಒಂದು ಚಿತ್ರವಾದ ನಂತರ ಮತ್ತೊಂದರಲ್ಲಿ ಭಿನ್ನ ಜಾನರಿನ ಕಥೆಗಳನ್ನು ಆರಿಸಿಕೊಳ್ಳುತ್ತಾ ಸಾಗುವವರು ಮಾತ್ರವೇ ಯಾವುದೇ ಚಿತ್ರರಂಗಗಳಲ್ಲಿ ಚಾಲ್ತಿಯಲ್ಲಿರಲು ಸಾಧ್ಯ. ಈ ನಿಟ್ಟಿನಲ್ಲಿ ನೋಡ ಹೋದರೆ ಯುವ ನಿರ್ದೇಶಕ ಮಂಜು ಸ್ವರಾಜ್ ಅವರ ಯಶಸ್ಸಿನ ಗುಟ್ಟೂ ಕೂಡಾ ಇಂಥಾ ಬದಲಾವಣೆಯಲ್ಲಿಯೇ ಅಡಗಿದೆ. ಶಿಶಿರದಿಂದ ಮೊದಲೊಂಡು ಈವರೆಗೂ ವಿಶೇಷವಾದ ಕಥೆಗಳನ್ನೇ ಮುಟ್ಟುತ್ತಾ ಬಂದಿರುವ ಮಂಜು ಸ್ವರಾಜ್ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಇದೇ ಮೊದಲ ಬಾರಿ ಸಂಪೂರ್ಣವಾಗಿ ಕಾಮಿಡಿ ಜಾನರ್ ಚಿತ್ರವನ್ನು ರೂಪಿಸಿದ್ದಾರೆ.
ಮಂಜು ಸ್ವರಾಜ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ಯುವ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಶಿಶಿರ, ಪಟಾಕಿ, ಶ್ರಾವಣಿ ಸುಬ್ರಹ್ಮಣ್ಯ, ಶ್ರೀಕಂಠ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಮಂಜು ಅತ್ಯತ್ತಮ ಬರಹಗಾರರಾಗಿ, ಸಿನಿಮಾ ರಂಗದಲ್ಲಿ ನಾನಾ ಅವತಾರಗಳನ್ನು ಎತ್ತಿರುವವರು. ಅತ್ಯಂತ ಕಷ್ಟದ ದಿನಗಳನ್ನು ಕಂಡು ಅದರ ನಡುವೆಯೂ ಚಿತ್ರರಂಗದಲ್ಲಿ ಹಂತ ಹಂತವಾಗಿ ಮೇಲೇರಿ ಬಂದಿರುವ ಮಂಜು ಸ್ವರಾಜ್ ಅವರ ಮಹಾ ಕನಸಿನಂಥಾ ಚಿತ್ರ ಮನೆ ಮಾರಾಟಕ್ಕಿದೆ.
ಮಂಜು ಸ್ವರಾಜ್ ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್ ಅವರ ಸಮ್ಮುಖದಲ್ಲಿ ಅರಳಿಕೊಂಡಿರೋ ಪ್ರತಿಭೆ. ಇದುವರೆಗೂ ಪ್ರೊಡಕ್ಷನ್ ಬಾಯ್, ಕ್ಯಾಮೆರಾ ಅಸಿಸ್ಟೆಂಟ್ ಸೇರಿದಂತೆ ನಾನಾ ಕಾರ್ಯಗಳನ್ನು ಮಾಡುತ್ತಲೇ ನಿರ್ದೇಶಕನಾಗಬೇಕೆಂಬ ಕನಸನ್ನು ಗಟ್ಟಿಗೊಳಿಸಿಕೊಂಡವರು ಮಂಜು ಸ್ವರಾಜ್. ಆ ನಂತರದಲ್ಲಿ ಮತ್ತೊಂದಷ್ಟು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಅನುಭವ ಗಿಟ್ಟಿಸಿಕೊಂಡು ಶಿಶಿರ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಈ ಬಾರಿ ಅವರು ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ನಿರ್ಮಾಪಕ ಎಸ್ ವಿ ಬಾಬು ಸಾರಥ್ಯದಲ್ಲಿ ಅದ್ಭುತ ಚಿತ್ರವನ್ನು ರೂಪಿಸಿದ ಖುಷಿಯಲ್ಲಿದ್ದಾರೆ.
ಎಸ್ ವಿ ಬಾಬು ಈ ಹಿಂದೆ ಮಂಜು ನಿರ್ದೇಶನ ಮಾಡಿದ್ದ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಸಿನಿಮಾದಲ್ಲಿ ಮಂಜು ಅವರ ಕಸುಬುದಾರಿಕೆಯನ್ನು ಮೆಚ್ಚಿಕೊಂಡಿದ್ದ ಅವರು ಮನೆ ಮಾರಾಟಕ್ಕಿದೆ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಈ ಮೂಲಕವೇ ಮಂಜು ಸ್ವರಾಜ್ ಹೊಸ ಅನುಭವವನ್ನು ಕಾಮಿಡಿ ಜಾನರ್ ಚಿತ್ರದ ಮೂಲಕ ದಕ್ಕಿಸಿಕೊಂಡಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ತಮ್ಮ ಸಿನಿ ಜೀವನ ಮತ್ತಷ್ಟು ಮಿಂಚುವಂತೆ ಮಾಡುತ್ತದೆಂಬ ನಂಬಿಕೆ ಮಂಜು ಸ್ವರಾಜ್ ಅವರಲ್ಲಿದೆ.