ಬೆಂಗಳೂರು: ಕನ್ನಡದಲ್ಲಿ ಸತ್ಯಕಥೆಗಳನ್ನಾಧರಿಸಿದ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತವೆ. ಇದೀಗ ಅದೇ ಸಾಲಿನಲ್ಲಿ ಸೇರ್ಪಡೆಯಾಗುವ ಎಟಿಎಂ (ಅಟೆಂಪ್ಟ್ ಟು ಮರ್ಡರ್) ಚಿತ್ರ ಬಿಡುಗಡೆಯಾಗುವ ಸನ್ನಾಹದಲ್ಲಿದೆ.
ಅಮರ್ ನಿರ್ದೇಶನದ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಜನರನ್ನು ಸೆಳೆದಿವೆ. ಈಗಾಗಲೇ ರವಿ ದೇವ್ ಸಂಗೀತ ನಿರ್ದೇಶನದ ಮೂರು ಹಾಡುಗಳು ಟ್ರೆಂಡ್ ಸೆಟ್ ಮಾಡಿವೆ. ಅಂದಹಾಗೆ ಈ ಕಥೆಯಲ್ಲಿ ವಿಲನ್ ಪಾತ್ರದತ್ತಲೇ ಫೋಕಸ್ ಇರೋದರಿಂದ ವಿಲನ್ ಎಂಟ್ರಿಗೆಂದೇ ವಿಶೇಷವಾದೊಂದು ಹಾಡು ಮಾಡಲಾಗಿದೆಯಂತೆ. ಅದೂ ಕೂಡಾ ಜನರಿಗಿಷ್ಟವಾಗಿದೆ. ಆನಂದ್ ಆಡಿಯೋ ಹೊರ ತಂದಿರೋ ಈ ಹಾಡುಗಳೇ ಚಿತ್ರದ ಬಗ್ಗೆ ಪ್ರೇಕ್ಷಕರನ್ನು ಕಾತರರನ್ನಾಗಿಸುವಲ್ಲಿ ಯಶಸ್ವಿಯಾಗಿವೆ.
ಇದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಯೊಂದನ್ನು ಆಧರಿಸಿದ ಚಿತ್ರ. ಕಾಪೋರೇಷನ್ ವೃತ್ತದಲ್ಲಿ ಎಟಿಎಂ ಒಂದರಲ್ಲಿ ಮಹಿಳೆಯ ಮೇಲೆ ಮಾರಣಾಂತಿಕವಾದ ಹಲ್ಲೆ ನಡೆದಿತ್ತಲ್ಲಾ? ಅದೇ ಘಟನೆಯನ್ನಾಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಕಮರ್ಷಿಯಲ್ ಅಂಶಗಳಾಚೆಗೆ ಈ ಚಿತ್ರವನ್ನು ಭಿನ್ನ ಬಗೆಯಲ್ಲಿ ರೂಪಿಸಲಾಗಿದೆಯಂತೆ.
ಸದ್ಯ ಬಿಡುಗಡೆಯ ಸರದಿಯಲ್ಲಿ ನಿಂತಿರುವ ಚಿತ್ರಗಳಲ್ಲಿ ಅಟೆಂಪ್ಟ್ ಟು ಮರ್ಡರ್ (ಎಟಿಎಂ) ಪ್ರೇಕ್ಷಕರ ಗಮನ ಸೆಳೆದಿರುವ ಚಿತ್ರವಾಗಿ ಮುಖ್ಯವಾಗಿದೆ. ಬೆಂಗಳೂರಿನಲ್ಲಿ ವರ್ಷಾಂತರಗಳ ಹಿಂದೆ ನಡೆದು ದೇಶವನ್ನೇ ಬೆಚ್ಚಿಬೀಳಿಸಿದ್ದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ ಅಂತ ನಿರ್ದೇಶಕ ಅಮರ್ ಆರಂಭದಲ್ಲಿ ಹೇಳಿಕೊಂಡಿದ್ದರು. ಹಾಗಾದರೆ ಅದು ಎಟಿಎಂಗೆ ನುಗ್ಗಿದ ದುಷ್ಕರ್ಮಿ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣವಾ? ಎಂಬ ಪ್ರಶ್ನೆ ಕಾಡೋದು ಸಹಜ. ಆದರೆ ಈ ವಿಚಾರದ ನಿಗೂಢವನ್ನು ಈವರೆಗೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಅದೇ ಘಟನೆಯೇ ಆಗಿದ್ದರೂ ನಿರೀಕ್ಷೆ ಮಾಡದಂಥಾ ರೀತಿಯಲ್ಲಿ ಚಿತ್ರ ಮೂಡಿ ಬಂದಿದೆ ಎಂಬುದು ಚಿತ್ರತಂಡದ ಭರವಸೆ.
ಇದು ಒಂದು ಕ್ರೈಂ ಓರಿಯಂಟೆಡ್ ಚಿತ್ರ ಎಂಬಂತೆ ಕಂಡರೂ ಈ ಚಿತ್ರದಲ್ಲೆಲ್ಲೂ ಕೊಲೆಗಳನ್ನು ವೈಭವೀಕರಿಸಿಲ್ಲವಂತೆ. ಅಸಲಿಗೆ ಕೊಲೆ ನಡೆಯುತ್ತದಾ ಎಂಬುದನ್ನೇ ಚಿತ್ರ ತಂಡ ಸಸ್ಪೆನ್ಸ್ ಆಗಿಟ್ಟಿದೆ. ಈ ನೈಜ ಘಟನೆಗೆ ಸಿನಿಮಾ ಟಚ್ ನೀಡಿರೋ ನಿರ್ದೇಶಕರು ಅದರ ಜೊತೆಗೆ ನವಿರಾದೊಂದು ಪ್ರೇಮ ಕಥೆಯನ್ನೂ ಹೇಳಿದ್ದಾರಂತೆ. ಈ ಕಾರಣದಿಂದಲೇ ಈ ಚಿತ್ರ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ನಿರ್ದೇಶಕರ ಅಭಿಪ್ರಾಯ. ಇನ್ನುಳಿದಂತೆ ವಿನಯ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ನಟನಾಗಬೇಕೆಂಬ ಕನಸು ಹೊತ್ತು ಆ ನಿಟ್ಟಿನಲ್ಲಿ ವರ್ಷಾಂತರಗಳ ಕಾಲ ಶ್ರಮ ವಹಿಸಿರುವ ವಿನಯ್ ಎಟಿಎಂ ಚಿತ್ರದ ಮೂಲಕ ಅದು ಕೈಗೂಡಿದ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರದಲ್ಲಿ ನಟಿಸಿರುವ ಧನ್ಯತೆ ವಿನಯ್ ಅವರಲ್ಲಿದೆ. ಈ ಚಿತ್ರದ ಮತ್ತೋರ್ವ ನಟ ಚಂದು ಗೌಡ. ಪ್ರಸ್ತುತ ಲಕ್ಷ್ಮೀಬಾರಮ್ಮ ಸೀರಿಯಲ್ ನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಇವರ ಪಾತ್ರದ ಹೆಸರೂ ಚಂದು. ಈ ಪಾತ್ರದ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರೋ ಇವರು ಎರಡು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇವರಿಗಿಲ್ಲಿ ಶೋಭಿತಾ ಎಂಬಾಕೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಐಟಿ ಕಂಪೆನಿ ಹುಡುಗಿಯಾಗಿ ನಟಿಸಿರೋ ಶೋಭಿತಾಗೂ ಇದು ಮೊದಲ ಚಿತ್ರ.