Bengaluru City
ಇದೇ ಶುಕ್ರವಾರ ತೆರೆಗೆ ಬರಲಿದೆ `ಏಪ್ರಿಲ್ ನ ಹಿಮಬಿಂದು’

ಬೆಂಗಳೂರು : ತನ್ನ ಹಾಡುಗಳ ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ‘ಏಪ್ರಿಲ್ ನ ಹಿಮಬಿಂದು’ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ.
ಹೌದು, ಪಕ್ಕಾ ಎಂಟರ್ ಟೈನ್ಮೆಂಟ್ ಮೂವಿ, ಕಂಪ್ಲೀಟ್ ಫ್ಯಾಮಿಲಿ ಮೂವಿ ಅದರಲ್ಲೂ ವಿಶೇಷವಾಗಿ ಹೊಸದಾಗಿ ಮದುವೆಯಾದವರು ನೋಡಲೇಬೇಕಾದ ಮೂವಿ ಎಂದು ಕನ್ನಡದ ದಿಗ್ಗಜ ಹಿರಿಯನಟ ದತ್ತಣ್ಣ ಅವರು ಹೇಳಿದ್ದ ‘ಏಪ್ರಿಲ್ ನ ಹಿಮಬಿಂದು’ ಚಿತ್ರ ಅಕ್ಟೋಬರ್ 6 ರಿಂದ ಕನ್ನಡ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಲಿದೆ.
ಹಿರಿಯ ನಟರಾದ ದತ್ತಣ್ಣರವರು ತನ್ನ ಅಣ್ಣನಾದ ವಿ.ಸೋಮಶೇಖರ್ ರಾವ್ ರೊಡನೆ ತೆರೆಯ ಮೇಲೆ ಬರುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಈ ಹಿಂದಿನ ಎರಡು ಚಿತ್ರಗಳೂ ಭಾರೀ ಯಶಸ್ಸು ಗಳಿಸಿತ್ತು. ಇದೀಗ ಮತ್ತೊಮ್ಮೆ ಜೊತೆಗೂಡಿರುವ ಹಿರಿಯ ದಿಗ್ಗಜರು ಸೀನಿಯರ್ ಸಿಟಿ ಜನಗಳಿಗೆ ಕೂಡಾ ಇಷ್ಟವಾಗುವ ಅದ್ಭುತ ಕಥಾಹಂದರವಿರುವ ಚಿತ್ರವನ್ನು ಹೊರ ತಂದಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ನಮಗೆಟುಕದ್ದನ್ನು ಪಡೆಯುವ ಕಾತರದಲ್ಲೇ ಇರುತ್ತಾರೆ. ಕೆಲವರಿಗೆ ಅದೃಷ್ಟವಶಾತ್ ಅದು ಸಿಗಬಹುದು. ಆದರೆ ಮುಕ್ಕಾಲು ಭಾಗ ಜನರಿಗೆ ಭ್ರಮನಿರಸನವಾಗುವುದು ಖಚಿತ. ಹಾಗಾಗಿ ಏಪ್ರಿಲ್ ನ ಹಿಮಬಿಂದು ಚಿತ್ರದ ಟೈಟಲ್ ಹೇಳುವಂತೆ ಏಪ್ರಿಲ್ ನಲ್ಲಿರದ ಹಿಮಬಿಂದುವನ್ನು ಹಾರೈಸುವ ಮನಸುಗಳಿಗೆ ಹೊಸ ಹೊಳಪು ಕೊಡುವ ಸಿನಿಮಾ ಇದಾಗಿರಲಿದೆ ಎಂದು ದತ್ತಣ್ಣ ಹೇಳಿದ್ದಾರೆ.
ಬಾಬು ಹಿರಣ್ಣಯ್ಯ, ಚಿದಾನಂದ್, ಟಿ.ವಿ ಗುರುಮೂರ್ತಿ, ಸಿದ್ಲಿಂಗು ಶ್ರೀಧರ್ ಮುಂತಾದ ಖ್ಯಾತನಾಮರ ದಂಡೇ ಈ ಚಿತ್ರದಲ್ಲಿದ್ದು ಶಿವ-ಜಗನ್ ರವರು ಹಾಗೂ ಅನೂಪ್ ಟಿ.ಆನಂದ್, ಸಂದೀಪ್ ಡಿ.ಎಸ್ ಚಿತ್ರ ನಿರ್ಮಾಣ ಮಾಡುವಲ್ಲಿ ನಿರ್ಮಾಪಕರ ಕಾರ್ಯನಿರ್ವಹಿಸಿದ್ದಾರೆ.
ಒಟ್ಟಿನಲ್ಲಿ ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಹೆಚ್.ಎಸ್.ವೆಂಕಟೇಶಮೂರ್ತಿಯವರುಗಳ ಶ್ರೇಷ್ಟ ಸಾಹಿತ್ಯವಿರುವ ಚಿತ್ರದ ಹಾಡುಗಳೂ ಸಾಕಷ್ಟು ಪಾಪ್ಯುಲರ್ ಆಗಿದ್ದು ಚಿತ್ರದ ನಿರೀಕ್ಷೆ ಕೂಡಾ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದೆ.
