ಮಂಡ್ಯ: ಇಡೀ ಚಿತ್ರರಂಗ ಸುಮಲತಾ ಪರ ನಿಂತಿದೆ ಎನ್ನುವುದು ತಪ್ಪು. ಕನ್ನಡ ಚಿತ್ರರಂಗ ಕಾವೇರಿ, ಮಹದಾಯಿ, ನೆಲ ಜಲ ವಿಚಾರದಲ್ಲಿ ಒಂದಾಗಿ ನಿಲ್ಲುತ್ತದೆ ಎಂದು ನಿರ್ಮಾಪಕ ಸಾರಾ ಗೋವಿಂದು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಾರಾ ಗೋವಿಂದ್, “ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷದಿಂದ ಯುವಕ ಇಂದು ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಬೆಂಬಲಿಸಲು ನಾನು ಇಲ್ಲಿ ಬಂದಿದ್ದೇನೆ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅವರ 20 ತಿಂಗಳ ಆಡಳಿತ ಹಾಗೂ ಈಗ ಮುಖ್ಯಮಂತ್ರಿ ಆದ್ಮೇಲೆ 10 ತಿಂಗಳ ಆಡಳಿತ ನೋಡಿದ ಮೇಲೆ ಅವರಿಗೆ ರೈತರ ಮೇಲೆ, ಕಾವೇರಿ ವಿಚಾರದಲ್ಲಿ ಅಥವಾ ಮಹಾದಾಯಿ ವಿಚಾರದಲ್ಲಿ ಅವರಿಗೆ ಇರುವ ಕಾಳಜಿಯನ್ನು ನೋಡಿ ನಾನು ಅವರ ಮಗನನ್ನು ಬೆಂಬಲಿಸಲು ಬಂದಿದ್ದೇನೆ” ಎಂದರು.
ನಿಖಿಲ್ ಇನ್ನು ಯುವಕ. ಆತನಿಂದ ಆಗಬೇಕಾದ ಹಲವು ಕೆಲಸಗಳು ಆಗಬೇಕಿದೆ. ಆತ ಮಂಡ್ಯ ಜನತೆಗೆ ಮಾಡಬೇಕಾದ ಕೆಲಸ ಬಹಳಷ್ಟು ಇದೆ. ಆ ಎಲ್ಲಾವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರ ಗೆಲುವಿಗೆ ಮಂಡ್ಯ ಜನತೆ ಕೈಜೋಡಿಸಬೇಕೆಂದು ಮಂಡ್ಯ ಜನತೆಗೆ ಚಲನಚಿತ್ರದ ನಿರ್ಮಾಪಕರಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಇಡೀ ಚಿತ್ರರಂಗ ಕಾವೇರಿ, ಮಹದಾಯಿ, ನೆಲ-ಜಲ ವಿಚಾರದಲ್ಲಿ ಒಂದಾಗಿ ನಿಲ್ಲುತ್ತದೆ. ಆದರೆ ರಾಜಕೀಯ ವಿಷಯಕ್ಕೆ ಬಂದಾಗ ಇಡೀ ಚಿತ್ರರಂಗ ಒಂದಾಗಲ್ಲ. ಅವರವರ ವೈಯಕ್ತಿಕ ಇರುತ್ತದೆ. ಇಡೀ ಚಿತ್ರರಂಗ ಯಾವಾಗ ಚುನಾವಣೆಗೆ ಬಂದಿದೆ? ಕೆಲವರು ಒಬ್ಬೊಬ್ಬರ ಪರ ಪ್ರಚಾರ ಮಾಡ್ತಾರೆ. ಇನ್ನು ಕೆಲವರು ತಟಸ್ಥರಾಗಿ ಇರುತ್ತಾರೆ ಎಂದು ಹೇಳಿದರು.