ಸೀಕ್ವೆನ್ಸ್ ಅನ್ನೋದು ಹಾಲಿವುಡ್, ಬಾಲಿವುಡ್ ಗಳಲ್ಲಿ ಹೆಚ್ಚಾಗಿತ್ತು. ಆದ್ರೆ ಇತ್ತೀಚೆಗೆ ಕನ್ನಡದಲ್ಲೂ ಸೀಕ್ವೆನ್ಸ್ ಹಾವಳಿ ಹೆಚ್ಚಾಗಿದೆ. ಅದೆಷ್ಟೋ ಸಿನಿಮಾಗಳಲ್ಲಿ ಕಥೆಯ ಗಡಸುತನ ಒಂದೇ ಭಾಗದಲ್ಲಿ ತೋರಿಸಲು ಆಗಲ್ಲ. ಹಾಗೇ ಒಂದೇ ಸಿನಿಮಾದಲ್ಲಿ ಇರುವಷ್ಟು ಮ್ಯಾಟರ್ ನ್ನು ತುರಿಕಿದರೆ ಪ್ರೇಕ್ಷಕನ ತಲೆಗೆ ಹೋಗಲ್ಲ. ಹೀಗಾಗಿ ನೋಡುಗರಿಗೂ ಮನರಂಜನೆಯಾಗಿ ನೀಡುವ ಮೆಸೇಜ್ ನ್ನು ಮನಸ್ಸಿಗೆ ಮುಟ್ಟುವ ಹಾಗೇ ಸಿನಿಮಾ ಕೊಡಬೇಕೆಂದರೆ ಒಂದಷ್ಟು ಫಿಲ್ಟರ್ ಇರಬೇಕಾಗುತ್ತದೆ. ಕಥೆಯ ಆಳವನ್ನು ಜನರಿಗೆ ಮುಟ್ಟಿಸಲೇಬೇಕಾದಂತ ಸಂದರ್ಭಗಳಲ್ಲಿ ಸೀಕ್ವೇನ್ಸ್ ದಾರಿ ಹಿಡಿಯಬೇಕಾಗುತ್ತದೆ. ಅದೇ ದಾರಿಯಲ್ಲಿ ಸಾಗುತ್ತಿರುವುದೇ ‘ತೋತಾಪುರಿ’ ಸಿನಿಮಾ.
ಹೌದು ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿಕೊಂಡಿದೆ ಚಿತ್ರತಂಡ. ಕಥೆ ತುಂಬಾ ಸ್ಟ್ರಾಂಗ್ ಆಗಿದ್ದು, ಭಾಗ 1 ಮತ್ತು 2 ರಲ್ಲಿ ಬರ್ತಾ ಇದೆ. ಸೀಕ್ವೆನ್ಸ್ ಸಿನಿಮಾಗಳು ಹೊಸತೇನಲ್ಲ. ಆದ್ರೆ ಸದ್ಯ ಬಂದು ಹೋಗಿರುವ ಬರುತ್ತಿರುವ ಸೀಕ್ವೆನ್ಸ್ ಸಿನಿಮಾಗಳಿಗೂ ‘ತೋತಾಪುರಿ’ ಗೂ ಕೊಂಚ ಭಿನ್ನ ಸಂಬಂಧವಿದೆ.
ಹೌದು, ಕತೆ ಚೆನ್ನಾಗಿದ್ರೆ ಅಥವಾ ಪ್ರೇಕ್ಷಕರಿಂದ ರೆಸ್ಪಾನ್ಸ್ ಚೆನ್ನಾಗಿ ಬಂದ್ರೆ ಆ ಸಿನಿಮಾದೊಳಗಿನ ಪಾತ್ರಗಳ ಎಳೆಯನ್ನು ಹಿಡಿದು ಸಿನಿಮಾವನ್ನು ಮುಂದುವರೆಸಲಾಗುತ್ತೆ. ಸಿನಿಮಾ ಹಿಟ್ ಆಗುವವರೆಗೂ ಅದರ ಸೀಕ್ವೇನ್ಸ್ ಬರಲಿದೆ ಎಂಬುದು ಪ್ರೇಕ್ಷಕನಿಗೆ ಗೊತ್ತಿರಲ್ಲ. ವಿಜಯ್ ಪ್ರಸಾದ್ ಪ್ರೇಕ್ಷಕನ ನರನಾಡಿಗಳನ್ನು ಅರಿತಿರುವವರಾಗಿರುವುದರಿಂದ, ಇವತ್ತಿನ ಪ್ರೇಕ್ಷಕ ಏನನ್ನ ಬಯಸುತ್ತಾನೆಂಬುದು ಅವರಿಗೆ ಗೊತ್ತು. ಹೀಗಾಗಿ ‘ತೋತಾಪುರಿ’ ಯನ್ನು ಎರಡು ಭಾಗಗಳಾಗಿ ಸೀಳಿದ್ದಾರೆ. ಇಡೀ ಭಾರತೀಯ ಚಿತ್ರರಂಗದಲ್ಲೇ ಎರಡು ಭಾಗಗಳನ್ನು ಒಮ್ಮೆಗೆ ಸಿದ್ಧಪಡಿಸಿದ ಉದಾಹರಣೆಯೆ ಇಲ್ಲ. ಅಂತದ್ದೊಂದು ದಾಖಲೆಯನ್ನು ಈಗಾಗಲೇ ‘ತೋತಾಪುರಿ’ ಸಿನಿಮಾ ಮಾಡಿದೆ. ಸದ್ಯ ಎರಡು ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಉಳಿದ ಕೆಲಸಕ್ಕೆ ಕೈ ಹಾಕಿದೆ. ಒಟ್ಟಾರೆ ಸದ್ಯ ಪ್ರಪಂಚದಲ್ಲಿರುವ ವೈರಸ್ ಎಂಬ ರೋಗ ಮಾಯವಾದ ನಂತರ, ಉಪ್ಪು, ಖಾರ ಹಾಕಿ ರೆಡಿ ಮಾಡುತ್ತಿರುವ ‘ತೋತಾಪುರಿ’ಯನ್ನು ಪ್ರೇಕ್ಷಕನಿಗೆ ಸವಿಯಲು ನೀಡಲಿದ್ದಾರೆ.
ನವರಸ ನಾಯಕ ಜಗ್ಗೇಶ್, ಸುಮನ್ ರಂಗನಾಥ್, ವೀಣಾ, ಅದಿತಿ ಪ್ರಭುದೇವ, ಡಾಲಿ ಧನಂಜಯ್ ಸೇರಿದಂತೆ ಇನ್ನು ಅನೇಕರು ತಾರಾಬಳಗದಲ್ಲಿದ್ದಾರೆ.