ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಬ್ರಹ್ಮಚಾರಿ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆಗಾಣುತ್ತಿದೆ. ನೀನಾಸಂ ಸತೀಶ್ ನಟಿಸಿರೋ ಈ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಫಸ್ಟ್ ನೈಟ್ ಟೀಸರ್ ನಿಂದ ಶುರುವಾಗಿ ಟ್ರೇಲರ್ ತನಕ ಬ್ರಹ್ಮಚಾರಿ ಪ್ರೇಕ್ಷಕರನ್ನು ಮರುಳು ಮಾಡಿಕೊಂಡು ಬಂದು ಇದೀಗ ಬಿಡುಗಡೆಯ ಹಂತ ತಲುಪಿಕೊಂಡಿದ್ದಾನೆ. ವಿಶೇಷವೆಂದರೆ, ಸಂಪೂರ್ಣ ಮನೋರಂಜನೆಯನ್ನೇ ಉದ್ದೇಶವಾಗಿಸಿಕೊಂಡಿರೋ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆಯಂತೆ. ಈ ಕಾರಣದಿಂದಲೇ ಚಿತ್ರತಂಡ ಕುಟುಂಬ ಸಮೇತರಾಗಿ ಬಂದು ನೋಡುವಂತೆ ಪ್ರೇಕ್ಷಕರಿಗೆ ಆಹ್ವಾನ ನೀಡುತ್ತಾ ಬಂದಿದೆ.
ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಎಂಬ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದವರು ಚಂದ್ರ ಮೋಹನ್. ಈ ಥರದ ಸಿನಿಮಾಗಳನ್ನು ರೂಪಿಸೋದು, ಇಡೀ ಸಿನಿಮಾದಲ್ಲಿ ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನು ನಗಿಸೋದೆಲ್ಲ ಅಷ್ಟು ಸಲೀಸಿನ ಸಂಗತಿಯಲ್ಲ. ಆದರೆ ಚಂದ್ರಮೋಹನ್ ಅದನ್ನು ಕರಗತ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಎರಡು ಸರಣಿ ಗೆಲುವುಗಳನ್ನು ತನ್ನದಾಗಿಸಿಕೊಂಡು, ಇದೀಗ ಬ್ರಹ್ಮಚಾರಿ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಿಂದಿದ್ದಾರೆ. ಈಗಾಗಲೇ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಅದರ ವಿಶಿಷ್ಟ ಕಂಟೆಂಟಿನ ವಿಚಾರಗಳೆಲ್ಲವೂ ಬ್ರಹ್ಮಚಾರಿಗೆ ಪ್ರೇಕ್ಷಕರೆಲ್ಲ ಬೇಷರತ್ತಾಗಿ ಫಿದಾ ಆಗುವಂಥಾ ಲಕ್ಷಣಗಳನ್ನೇ ಧ್ವನಿಸುವಂತಿವೆ.
ಗುಪ್ತ ಸಮಸ್ಯೆಗಳನ್ನು ಒಳಗೇ ಇಟ್ಟುಕೊಂಡು, ಕನಿಷ್ಟ ಅದಕ್ಕೊಂದು ಚಿಕಿತ್ಸೆ ಪಡೆಯಲೂ ಮುಜುಗರ ಪಡುವ, ಹೇಗೋ ಅದು ಬಟಾಬಯಲಾದ ನಂತರ ಮಾನಸಿಕ ಹಿಂಸೆ ಅನುಭವಿಸುವಂಥಾ ಅದೆಷ್ಟೋ ಜನರಿದ್ದಾರೆ. ಅಂಥಾದ್ದೊಂದು ಗುಪ್ತ ಸಮಸ್ಯೆಯಿಂದ ಬಳಲೋ ನಾಯಕನ ಪಡಿಪಾಟಲುಗಳನ್ನು ಎಲ್ಲಿಯೂ ವಲ್ಗರ್ ಅನ್ನಿಸದಂತೆ, ಸಭ್ಯತೆಯ ಗೆರೆ ದಾಟದಂತೆ, ಪ್ರತೀ ಫ್ರೇಮಿನಲ್ಲಿಯೂ ನಗಿಸುವಂತೆ ಕಟ್ಟಿ ಕೊಡುವಲ್ಲಿ ಚಂದ್ರ ಮೋಹನ್ ಗೆದ್ದಿದ್ದಾರಂತೆ. ಚಿತ್ರತಂಡದಲ್ಲಿಯೂ ಆ ಬಗೆಗಿನ ಗಾಢವಾದ ವಿಶ್ವಾಸವಿದೆ. ಈಗಾಗಲೇ ಹೊರ ಬಂದಿರುವ ಟೀಸರ್ ಮತ್ತು ಟ್ರೇಲರ್ ಗಳಲ್ಲಿ ಅದರ ಕುರುಹುಗಳಿವೆ.
ಉದಯ್ ಮೆಹ್ತಾ ನಿರ್ಮಾಣದ ಚಿತ್ರಗಳೆಂದ ಮೇಲೆ ಅಲ್ಲಿ ಅದ್ಧೂರಿತನದ ಹಾಜರಿ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಬ್ರಹ್ಮಚಾರಿಯನ್ನೂ ಕೂಡಾ ಅವರು ಅಷ್ಟೇ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಹಾಡುಗಳಲ್ಲಿಯೇ ಅದಕ್ಕೆ ಸಾಕ್ಷಿಗಳು ಸಿಗುವಂತಿವೆ. ಟ್ರೇಲರ್ ಮತ್ತು ಟೀಸರ್ ಗಳಲ್ಲಿ ಕಚಗುಳಿ ಇಡುವಂತಾ ಸನ್ನಿವೇಶ, ಡೈಲಾಗುಗಳಿಂದಲೇ ಬ್ರಹ್ಮಚಾರಿ ಲಕಲಕಿಸಿದ್ದಾನೆ. ಹಾಗಂತ ಇದನ್ನೇನು ಡಬಲ್ ಮೀನಿಂಗ್ಗಳಿಂದ ತುಂಬಿರೋ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದು ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಚಿತ್ರ. ಒಂದೇ ಒಂದು ಮುಜುಗರದ ಸನ್ನಿವೇಶಗಳೂ ಈ ಸಿನಿಮಾದಲ್ಲಿಲ್ಲವಂತೆ. ಅಂತೂ ನೀನಾಸಂ ಸತೀಶ್ ಬ್ರಹ್ಮಚಾರಿಯಾಗಿ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸೋದರಲ್ಲಿ ಯಾವ ಸಂದೇಹವೂ ಇಲ್ಲ.