ಕನ್ನಡ ಸಿನಿಮಾ ಇಂಡಸ್ಟ್ರಿ ದೊಡ್ಡದಾಗಿ ಬೆಳೆದಿದೆ. ಹಾಗೇ ಸಿನಿಮಾಗಳ ತಯಾರಿ ಕೂಡ ಅಷ್ಟೇ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ವರ್ಷಕ್ಕೊಂದೊ ಎರಡೋ ಸಿನಿಮಾಗಳು ಬರ್ತಿದ್ದಂತ ಕಾಲ ಬದಲಾಗಿ ವಾರಕ್ಕೆ 9 ರಿಂದ 10 ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವಾರ ರಿಲೀಸ್ ಆದ ಸಿನಿಮಾ ಮುಂದಿನ ಶುಕ್ರವಾರ ಬರುವುದರೊಳಗೆ ಎತ್ತಂಗಡಿಯಾಗುತ್ತಿವೆ. ನಿರ್ಮಾಪಕರು ತಲೆ ಮೇಲೆ ಕೈ ಹೊತ್ತು ಕೂರುವಂತ ಪರಿಸ್ಥಿತಿ ಇದ್ದು, ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ. ಇಷ್ಟೆಲ್ಲಾ ಸಂಕಷ್ಟ ಪ್ರತಿವಾರ ಎದುರಾಗುತ್ತಿದೆ. ಆದ್ರೆ ಇಷ್ಟು ಸಮಸ್ಯೆಗಳ ನಡುವೆಯೂ ಕನ್ನಡ ಸಿನಿಮಾವೊಂದು ಗೆದ್ದಿದೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾವೊಂದು ರಿಲೀಸ್ ಆಗಿ 100 ದಿನಗಳು ಓಡುವುದೆಂದರೆ ಅದೊಂದು ಅದ್ಭುತವೇ ಸರಿ. 100 ದಿನಗಳಿರಲಿ, ಎರಡು ವಾರಗಳ ಕಾಲ ಥಿಯೇಟರ್ ನಲ್ಲಿ ಉಳಿದರೆ ಸಾಕು ಎನ್ನುತ್ತಾರೆ. ಆದ್ರೆ ‘ಅಳಿದು ಉಳಿದವರು’ ಸಿನಿಮಾ ಇದಕ್ಕೆ ಹೊರತಾಗಿದೆ. ಎಲ್ಲಾ ಸಮಸ್ಯೆಗಳನ್ನು ದಾಟಿ ಮುಂದೆ ನುಗ್ಗಿದೆ. ರಿಲೀಸ್ ಆದಾಗಿನಿಂದಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿರುವ ಸಿನಿಮಾ ಇಂದು 100 ದಿನಗಳನ್ನು ಪೂರೈಸಿದೆ. 100 ಡೇಸ್ ಸಿನಿಮಾ ಸಕ್ಸಸ್ ಎಂಬ ಮಾತನ್ನ ಕೇಳಿಯೇ ಅದೆಷ್ಟೋ ದಿನಗಳು ಆಗೋಗಿದೆ. ಈ ಸಿನಿಮಾದ ಸಕ್ಸಸ್ ಗೆ ಇಡೀ ಸ್ಯಾಂಡಲ್ ವುಡ್ ಖುಷಿ ಪಟ್ಟಿದ್ದು, ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ. ಚಿತ್ರಕಥೆ, ನಿರೂಪನಾ ರೀತಿಗೆ ಜನ ಫಿದಾ ಆಗಿದ್ದು, ಈಗಲೂ ಡಿಮ್ಯಾಂಡ್ ಹಾಗೆಯೇ ಉಳಿದಿದೆ.
ಅಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ‘ಅಳಿದು ಉಳಿದವರು’ ಸಿನಿಮಾವನ್ನು ಬೆದ್ರ ವೆಂಚರ್ಸ್ ಮತ್ತು ಪಿವಿಆರ್ ಪಿಚ್ಚರ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅರವಿಂದ್ ಶಾಸ್ತ್ರಿ ನಿರ್ದೇಶನ ಮಾಡಿದ್ದು, ಮಿಥುನ್ ಸಂಗೀತ ಎಲ್ಲರನ್ನು ಮೋಡಿ ಮಾಡಿದೆ. ಇನ್ನು ಅಭಿಷೇಕ್ ಕಾಸರಗೋಡು ಕ್ಯಾಮೆರಾದಲ್ಲಿ ಅದ್ಭುತ ಚಿತ್ರಗಳು ಸೆರೆಯಾಗಿದ್ದು, ಸಿನಿಮಾ ಇನ್ನಷ್ಟು ಯಶಸ್ವಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.