ಬೆಂಗಳೂರು: ನಗರದಲ್ಲಿ ಕನ್ನಡ ಪರ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ತಾಜಾ ಉದಾಹರಣೆ ಎಂಬಂತೆ ನಗರದ ಹುಳಿಮಾವಿನ ಪ್ರದೇಶದಲ್ಲಿ ಇಂತಹದ್ದೇ ಘಟನೆ ನಡೆದಿದೆ.
ಅಂಗಡಿಯ ಮುಂದೇ ಕನ್ನಡದಲ್ಲೇ ಬೋರ್ಡ್ ಹಾಕಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಹುಳಿಮಾವಿನ ಬಳಿ ಇರುವ ಜೆಸ್ ಎಂಬ ಬೇಕರಿಯಲ್ಲಿ ಕನ್ನಡ ಬೋರ್ಡ್ ಇರದ ಹಿನ್ನೆಲೆ ಕ್ಯಾತೆ ತೆಗೆದ ಕಾರ್ಯಕರ್ತರು ತಕ್ಷಣವೇ ಕನ್ನಡ ಬೋರ್ಡ್ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೇ ಸಂಘಟನೆಯ ಕಾರ್ಯಕರ್ತರು ನೇರವಾಗಿ ಬೇಕರಿಗೆ ನುಗ್ಗಿ ಅಂಗಡಿ ಮಾಲಕಿಯ ಜೊತೆ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಕುಪಿತಗೊಂಡ ಮಾಲಕಿ ಕಾರ್ಯಕರ್ತನ ಮೊಬೈಲ್ ಪುಡಿ ಪುಡಿ ಮಾಡಿದ್ದಾರೆ.
ಘಟನೆಯ ನಂತರ ಪೊಲೀಸ್ ಠಾಣೆಗೆ ತೆರಳಿರುವ ಸಂಘಟನೆಯ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಿದ್ದಾರೆ. ಪ್ರಸ್ತುತ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.