ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಎಡವಟ್ಟು: ಕೇಂದ್ರ ನೀಡಿದ ಪುಸ್ತಕದಲ್ಲಿ ಆರ್‌ಎಸ್‌ಎಸ್ ಪತ್ರ- ‘ಕೈ’ ಸಂಸದರ ವಿರೋಧ

Public TV
2 Min Read
Kannada Abhivruddhi Pradhikara Meeting

ನವದೆಹಲಿ: ಆರ್‌ಎಸ್‌ಎಸ್ ಶಿಫಾರಸುಗಳುಳ್ಳ ಹೊತ್ತಿಗೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿವಾದಕ್ಕೆ ಗುರಿಯಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಡೆ ವಿರೋಧಿಸಿ ಕಾಂಗ್ರೆಸ್ ಸಂಸದರು ಸಭಾ ತ್ಯಾಗ ಮಾಡಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದ ರಾಜ್ಯಸಭಾ ಸಂಸದ ಬಿ.ಕೆ. ಹರಿಪ್ರಸಾದ್, ರಾಜೀವ್ ಗೌಡ, ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್, ನಾಸೀರ್ ಹುಸೇನ್ ಲೋಕಸಭಾ ಸಂಸದ ಡಿ.ಕೆ.ಸುರೇಶ್ ಸಭಾ ತ್ಯಾಗ ಮಾಡಿದರು.

Kannada Abhivruddhi Pradhikara Meeting C

ವಿವಿಧ ವಲಯಗಳಲ್ಲಿ ಕನ್ನಡ ಅಭಿವೃದ್ಧಿ ಸಂಬಂಧ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಭರಣ ನೇತೃತ್ವದಲ್ಲಿ ನಿಯೋಗವೊಂದು ಕೇಂದ್ರ ಸಚಿವರ ಭೇಟಿಗೆ ದೆಹಲಿಗೆ ಆಗಮಿಸಿತ್ತು. ನಿಯೋಗದಲ್ಲಿ ಮಾಳವಿಕಾ ಅವಿನಾಶ್, ಪ್ರಕಾಶ್ ಬೆಳವಾಡಿ, ಗುರುರಾಜ್ ಕರ್ಜಗಿ ಸೇರಿ ಹಲವು ಸದಸ್ಯರು ಒಳಗೊಂಡಿದ್ದರು. ಕೇಂದ್ರ ಸಚಿವರ ಭೇಟಿಗೂ ಮುನ್ನ ಡಿ.ವಿ.ಸದಾನಂದ ಗೌಡ ನಿವಾಸದಲ್ಲಿ ಸರ್ವ ಸಂಸದರ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಲು ತಂದಿದ್ದ ಹೊತ್ತಿಗೆಯಲ್ಲಿ ಆರ್‍ಎಸ್‍ಎಸ್ ಶಿಫಾರಸು ಪತ್ರವನ್ನು ಕಂಡು ಸಂಸದರಾದ ಬಿ.ಕೆ.ಹರಿಪ್ರಸಾದ್, ರಾಜೀವ್ ಗೌಡ ವಿರೋಧಿಸಿದರು. ಸರ್ಕಾರ ಸಂಸ್ಥೆವೊಂದರ ಪುಸ್ತಕದಲ್ಲಿ ಆರ್‌ಎಸ್‌ಎಸ್ ಪತ್ರ ಬಳಕೆ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಭಾ ತ್ಯಾಗ ಮಾಡಿದರು.

Kannada Abhivruddhi Pradhikara Meeting D

ಬಳಿಕ ಮಾತನಾಡಿದ ಎಲ್.ಹನುಮಂತಯ್ಯ, ಆರ್‌ಎಸ್‌ಎಸ್ ನೋಂದಣಿಯಾಗದ ಸಂಸ್ಥೆ. ಅದರಲ್ಲೂ ಬಹು ಸಂಖ್ಯೆ ಜನರಿಂದ ಟೀಕೆಗೆ ಒಳಗಾಗಿರುವ ಸಂಘಟನೆ. ಇದು ಹಿಂದಿ ಮತ್ತು ಸಂಸ್ಕೃತವನ್ನು ಪ್ರತಿಪಾದಿಸುವ ಸಂಸ್ಥೆಯಾಗಿದ್ದು, ಇದರ ಶಿಫಾರಸು ಪತ್ರ ಬಳಸಿದ್ದು ಸರಿಯಲ್ಲ ಎಂದು ಹರಿಹಾಯ್ದರು. ಈ ಸಂಘಟನೆ ಪತ್ರ ಸರ್ಕಾರ ದಾಖಲೆಯಲ್ಲಿ ತುರುಕಲಾಗಿದೆ ಆಡಳಿತರೂಢ ಸರ್ಕಾರವನ್ನು ಮೆಚ್ಚಿಸಲು ಪ್ರಾಧಿಕಾರ ಹೀಗೆ ಮಾಡಿದೆ ಎಂದು ದೂರಿದರು.

ಜಿ.ಸಿ.ಚಂದ್ರಶೇಖರ್ ಮಾತಾನಾಡಿ, ನಾವು ಹಿಂದೆ ಕನ್ನಡದ ಅಭಿವೃದ್ಧಿ ಬಗ್ಗೆ ಸಂಸತ್‍ನಲ್ಲಿ ಸಾಕಷ್ಟು ಚರ್ಚಿಸಿದ್ದೇವೆ. ಇತರೆ ಕನ್ನಡದ ಸಂಘ ಸಂಸ್ಥೆಗಳು ಅನೇಕ ಶಿಫಾರಸು ಮಾಡಿದೆ. ಅದು ಯಾವುದನ್ನು ಬಳಸದೇ ಆರ್‌ಎಸ್‌ಎಸ್ ಶಿಫಾರಸು ತುರುಕುವ ಪ್ರಯತ್ನ ಮಾಡಿದೆ ಎಂದರು.

Kannada Abhivruddhi Pradhikara Meeting A

ಈ ಬಗ್ಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಭರಣ, ಮಾಹಿತಿಯನ್ನು ಅರ್ಥೈಸುವ ದೃಷ್ಟಿಯಿಂದ ಕೆಲವು ಪ್ರಮುಖ ಮಾಹಿತಿಯಷ್ಟೆ ಹೊತ್ತಿಕೆಯಲ್ಲಿ ಸೇರಿಸಿದೆ. ಕೇವಲ ಬುಲೆಟ್ ಪಾಯಿಂಟ್‍ಗಳನ್ನು ಮಾಡಿದ್ದೇವೆ. ಇದಕ್ಕಾಗಿ ಆರ್‌ಎಸ್‌ಎಸ್ ಪತ್ರವೊಂದನ್ನು ಮಾತ್ರ ಸೇರಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಇತರೆ ಸಂಸ್ಥೆಗಳ ಶಿಫಾರಸುಗಳನ್ನು ಸೇರಿಸಲಾಗುವುದು. ಕನ್ನಡ ಅಭಿವೃದ್ಧಿಯೇ ಪ್ರಾಧಿಕಾರದ ಮುಖ್ಯ ಉದ್ದೇಶ ಎಂದು ಸ್ಪಷ್ಟನೆ ನೀಡಿದರು.

ಸಂಘ ಪರವಾರಕ್ಕೂ ಎಲ್ಲ ಭಾಷೆಯ ಪ್ರಮುಖ್ಯತೆ ಅರ್ಥವಾಗಿದೆ. ಮಾತೃಭಾಷೆಗೆ ಹೆಚ್ಚಿನ ಅವಕಾಶ ಬೇಕು ಎಂದು ಆರ್‌ಎಸ್‌ಎಸ್ ಹೇಳಿದೆ. ಸಂಘ ಪರಿವಾರದ ಸಿದ್ಧಾಂತಗಳನ್ನು ಕೇಂದ್ರ ಸರ್ಕಾರ ಒಪ್ಪಿದೆ ಅವರದೇ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಬಹುದು. ಹೀಗಾಗಿ ಆರ್‌ಎಸ್‌ಎಸ್ ಪತ್ರವನ್ನು ಪುಸ್ತಕದಲ್ಲಿ ಸೇರಿಸಿದೆ ಎಂದು ನಿಯೋಗ ಸದಸ್ಯ ಪ್ರಕಾಶ ಬೆಳವಾಡಿ ಹೇಳಿದರು.

Kannada Abhivruddhi Pradhikara Meeting E 1

Share This Article
Leave a Comment

Leave a Reply

Your email address will not be published. Required fields are marked *