ಲೋಕಸಭಾ ಅಖಾಡದಲ್ಲಿರುವ ಕಂಗನಾ ರಣಾವತ್, ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮತದಾರರನ್ನು ಸೆಳೆಯಲು, ಅವರದ್ದೇ ಆದ ರೀತಿಯಲ್ಲಿ ತಂತ್ರಗಳನ್ನು ರೂಪಿಸಿದ್ದಾರೆ. ಮಂಡಿ ಕ್ಷೇತ್ರದ ಭರ್ಮೌರ್ ಗೆ ಭೇಟಿ ನೀಡಿರುವ ಕಂಗನಾ, ಅಲ್ಲಿನ ಪುರಾತನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಚಂಬಾ ಗಡ್ಡಿ (Chamba Gaddi) ಸಮುದಾಯದ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಮತಯಾಚನೆ ಮಾಡಿದ್ದಾರೆ.
ಸದಾ ವಿವಾದಕ್ಕೆ ಸಿಲುಕಿಕೊಳ್ಳುವ ಕಂಗನಾ, ರಾಜಕೀಯ ಕ್ಷೇತ್ರದಲ್ಲೂ ಅದನ್ನು ಮುಂದುವರೆಸಿಸಿದ್ದಾರೆ. ಅವರ ಆಹಾರದ ವಿಚಾರ ಈ ರಾಜಕೀಯ ವಲಯದಲ್ಲಿ ಭಾರೀ ಸುದ್ದಿಯಾಗಿದೆ. ಕಂಗನಾ ರಣಾವತ್ (Kangana Ranaut) ಅವರಿಗೆ ಗೋಮಾಂಸ (Beef) ಅಂದರೆ ಇಷ್ಟ. ಅವರೇ ಅದನ್ನು ಹೇಳಿಕೊಂಡಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ (Vijay Vadettiwar). ಈ ಮಾತು ಪರ ವಿರೋಧಕ್ಕೆ ಕಾರಣವಾಗಿತ್ತು. ಕಂಗನಾ ಮೇಲೆಯೂ ಹಲವರು ಮುಗಿಬಿದ್ದಿದ್ದರು.
ಮಾತು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕಂಗನಾ ಆ ಮಾತಿಗೆ ತಿರುಗೇಟು ನೀಡಿದ್ದಾರೆ. ನಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಮಾಂಸವನ್ನು ಸೇವಿಸುವುದಿಲ್ಲ. ನನ್ನ ಬಗ್ಗೆ ಸಂಪೂರ್ಣವಾಗಿ ಆಧಾರರಹಿತ ವದಂತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ಯೋಗ ಮತ್ತು ಆಯುರ್ವೇದವನ್ನು ಪ್ರತಿಪಾದಿಸುತ್ತಿದ್ದೇನೆ ಮತ್ತು ಪ್ರಚಾರ ಮಾಡುತ್ತಿದ್ದೇನೆ ಎಂದಿದ್ದಾರೆ.
ವಿರೋಧಿಗಳ ಬಗ್ಗೆಯೂ ಕಟುವಾಗಿಯೇ ಮಾತನಾಡಿರುವ ಕಂಗನಾ, ಇಂತಹ ತಂತ್ರಗಳು ನನ್ನ ಇಮೇಜ್ ಹಾಳುಮಾಡಲು ಕೆಲಸ ಮಾಡುವುದಿಲ್ಲ. ನನ್ನ ಜನರು ನನ್ನ ಬಗ್ಗೆ ತಿಳಿದಿದ್ದಾರೆ ಮತ್ತು ನಾನು ಹೆಮ್ಮೆಯ ಹಿಂದೂ ಎಂದು ಅವರಿಗೆ ತಿಳಿದಿದೆ. ಯಾವುದೇ ಪ್ರಯತ್ನ ಅವರನ್ನು ದಾರಿ ತಪ್ಪಿಸುವುದಿಲ್ಲ ಜೈ ಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ ನಟಿ, ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ.