ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ ಬಾಲಿವುಡ್ ಬಿಡುವ ಬಗ್ಗೆ ಮಾತನಾಡಿದ್ದಾರೆ. ಸದ್ಯ ಲೋಕಸಭಾ (Lok Sabha) ಚುನಾವಣೆಯಲ್ಲಿ ಸ್ಪರ್ಧಿಸಿರುವ ಅವರು, ಈ ಚುನಾವಣೆಯಲ್ಲಿ ಗೆದ್ದರೇ ತಾವು ಬಾಲಿವುಡ್ ತೊರೆದು, ಸಂಪೂರ್ಣವಾಗಿ ಜನರ ಸೇವೆಗೆ ನಿಲ್ಲುವುದಾಗಿ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಒಂದು ಕಡೆ ಕಂಗನಾ ರಣಾವತ್ ಗೆಲ್ಲಲೇಬೇಕು ಎಂದು ಹಠತೊಟ್ಟು ಹಗಲು ರಾತ್ರಿ ಎನ್ನದೇ ಜನರ ಮುಂದೆ ನಿಲ್ಲುತ್ತಿದ್ದಾರೆ. ಮತ್ತೊಂದು ಕಡೆ ಕಂಗನಾ ವಿರುದ್ಧ ಅನೇಕರು ಟೀಕೆ ಮಾಡುತ್ತಿದ್ದಾರೆ. ಅದರಲ್ಲೂ ಕಂಗನಾ ರಣಾವತ್ (Kangana Ranaut) ಜೊತೆ ಒಟ್ಟೊಟ್ಟಿಗೆ ಕೆಲಸ ಮಾಡಿದ ಸ್ವರಾ ಭಾಸ್ಕರ್ ಟೀಕಿಸಿದ್ದಾರೆ. ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದವರು. ಒಬ್ಬರೊನ್ನೊಬ್ಬರು ಆತುಕೊಂಡು ಕೂತವರು. ಆದರೆ, ನಂತರದ ದಿನಗಳಲ್ಲಿ ಹಾವು ಮುಂಗಸಿಯಂತೆ ಕಿತ್ತಾಡಿದವರು. ಆ ಕಿತ್ತಾಟ ಈಗಲೂ ಮುಂದುವರೆದಿದೆ. ಕಂಗನಾ ಈಗ ಲೋಕಸಭಾ ಕಣದಲ್ಲಿ ಇದ್ದಾರೆ. ಅದಕ್ಕೂ ಮುನ್ನ ಆಡಳಿತ ಪಕ್ಷದ ಪರವಾಗಿ ಸಾಕಷ್ಟು ಮಾತನಾಡಿದ್ದಾರೆ. ಈ ಕುರಿತಂತೆ ಸ್ವರಾ ಅಪಸ್ವರ ಎತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಅವರಿಗೂ ಮತ್ತು ಕಂಗನಾಗೂ ಇರುವ ವ್ಯತ್ಯಾಸವನ್ನು ಹೇಳಿಕೊಂಡಿದ್ದು, ಕಂಗನಾ ಎಂದಿಗೂ ಆಡಳಿತ ಸರಕಾರದ ವಿರೋಧವಾಗಿ ಮಾತನಾಡಲ್ಲ. ಅವರು ಯಾವಾಗಲೂ ಪರವಾಗಿಯೇ ಇರುತ್ತಾರೆ. ನಾನು ಹಾಗಲ್ಲ, ಜನರ ಪರವಾಗಿ ನಿಂತುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸ್ವರಾ ರೆಬೆಲ್ ನಟಿಯಾಗಿ ಮಾರ್ಪಾಡಾಗಿದ್ದಾರೆ. ಅಪರಾಧಿ ಮುಸ್ಲಿಂ ಆಗಿದ್ದರೆ ಮಾತ್ರ ಮಹಿಳಾ ರಕ್ಷಣೆ ಬಗ್ಗೆ ಜನರು ಮಾತನಾಡುತ್ತಾರೆ ಎಂದು ಹೇಳುವ ಮೂಲಕ ಪ್ರಜ್ವಲ್ ರೇವಣ್ಣ ಪ್ರಕರಣದ ವಿಶ್ಲೇಷಣೆ ಮಾಡಿದ್ದಾರೆ ಸ್ವರಾ ಭಾಸ್ಕರ್ (Swara Bhaskar). ತಪ್ಪು ಮಾಡಿರುವ ವ್ಯಕ್ತಿ ಯಾವ ಧರ್ಮದವನು ಎನ್ನುವುದರ ಮೇಲೆ ಹೋರಾಟಗಳು ಆಗುತ್ತವೆ ಎಂದು ಮಾತನಾಡಿದ್ದಾರೆ. ಪ್ರಜ್ವಲ್ ಜಾಗದಲ್ಲಿ ಮುಸ್ಲಿಂ ವ್ಯಕ್ತಿ ಇದ್ದಿದ್ದರೆ ಹೋರಾಟ ಬೇರೆಯ ಸ್ವರೂಪವನ್ನೇ ಪಡೆದುಕೊಳ್ಳುತ್ತಿತ್ತು ಎಂದಿದ್ದಾರೆ ಸ್ವರಾ.