ಬೈಕ್‍ನಲ್ಲಿ ಬಂದು 4 ಲಕ್ಷ ರೂ. ದೋಚಿದ ಖದೀಮರು

Public TV
1 Min Read
RMR Amount

ರಾಮನಗರ: ಬೈಕ್‍ನಲ್ಲಿ ಬಂದ ಕಳ್ಳರು ವ್ಯಕ್ತಿಯೊಬ್ಬರಿಂದ 4 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಕನಕಪುರದಲ್ಲಿ ನಡೆದಿದೆ.

ನಿವೃತ್ತ ಗ್ರಂಥಪಾಲಕ ತಿಮ್ಮಗೌಡ, ನಗರದ ರೂರಲ್ ಪದವಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಮಂಜುನಾಥ್ ಹಾಗೂ ಕ್ಲರ್ಕ್ ನಾಗಮ್ಮ ಹಣ ಕಳೆದುಕೊಂಡವರು. ಕನಕಪುರ ನಗರದ ಎಕ್ಸ್ ಮುನಿಸಿಪಲ್ ಸ್ಕೂಲ್ ರಸ್ತೆಯಲ್ಲಿನ ಎಸ್‍ಬಿಎಂ ಬ್ಯಾಂಕಿನ ಶಾಖೆಯಿಂದ  ತಿಮ್ಮಗೌಡ ಅವರು ಹಣ ಡ್ರಾ ಮಾಡಿಕೊಂಡು ಮರಳುತ್ತಿದ್ದಾಗ ಕಳ್ಳರು ಕೈಚಳಕ ತೋರಿದ್ದಾರೆ.

RMR
ಹಣ ಕಳೆದುಕೊಂಡ ತಿಮ್ಮಗೌಡ

ಕಳೆದ ಮೂರು ತಿಂಗಳಿನಿಂದ ರೂರಲ್ ಪದವಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗೆ ವೇತನ ನೀಡಿರಲಿಲ್ಲ. ಹೀಗಾಗಿ ಮಂಗಳವಾರ ಕಾಲೇಜು ಆಡಳಿತ ಮಂಡಳಿ ಎಲ್ಲರ ಬ್ಯಾಂಕ್ ಖಾತೆಗೆ ವೇತನ ಹಾಕಿತ್ತು. ಮಂಜುನಾಥ್ ಹಾಗೂ ನಾಗಮ್ಮ ಅವರು ಹಣ ಡ್ರಾ ಮಾಡಿಕೊಳ್ಳಲು ಇಂದು ಎಸ್‍ಬಿಎಂ ಬ್ಯಾಂಕ್‍ಗೆ ಹೋಗಿದ್ದರು. ನಿವೃತ್ತ ಗ್ರಂಥಪಾಲಕ ತಿಮ್ಮಗೌಡ ಅವರು ಕೂಡ ಬ್ಯಾಂಕ್‍ಗೆ ಹೋಗಿದ್ದರು.

ನಿಮ್ಮ ಹಣವನ್ನು ಡ್ರಾ ಮಾಡಿಕೊಂಡು ತರುತ್ತೇನೆ. ನೀವು ಕಾಲೇಜಿಗೆ ಹೋಗಿ ಎಂದು ತಿಮ್ಮಗೌಡ ಅವರು ನಾಗಮ್ಮ ಹಾಗೂ ಮಂಜುನಾಥ್ ಅವರಿಂದ ಚೆಕ್ ಪಡೆದಿದ್ದರು. ಈ ಮೂಲಕ ಮಂಜುನಾಥ್ ಅವರ 3.58 ಲಕ್ಷ ರೂ. ಹಾಗೂ ನಾಗಮ್ಮ ಅವರ 42 ಸಾವಿರ ರೂ. ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂಪಾಯಿಗಳನ್ನು ತಿಮ್ಮೇಗೌಡ ಬ್ಯಾಗ್‍ನಲ್ಲಿ ಹಣ ತರುತ್ತಿದ್ದರು. ನಗರಸಭೆ ದಾಟಿ ಕಾಲೇಜು ಆವರಣ ಪ್ರವೇಶಿಸುವುದಕ್ಕೂ ಮುನ್ನ ಬೈಕ್‍ನಲ್ಲಿ ಬಂದ ಕಳ್ಳರು, ಹಣ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಕನಕಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RMR A 1

Share This Article
Leave a Comment

Leave a Reply

Your email address will not be published. Required fields are marked *