ಬೆಂಗಳೂರು: ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ, ಶಾಸಕ ಕಂಪ್ಲಿ ಗಣೇಶ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧಮ ವಿಧಿಸಿ ರಾಮನಗರದ ಸಿಜೆಎಂ ಕೋರ್ಟ್ ಆದೇಶ ನೀಡಿದೆ.
ಗುಜರಾತಿನ ಸೋಮನಾಥಪುರದಲ್ಲಿ ಬಂಧನಕ್ಕೆ ಒಳಗಾಗಿದ್ದ ಗಣೇಶ್ ಅವರನ್ನು ಇಂದು ಮಾಗಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರಿ ಪಡಿಸಿದರು. ವಿಚಾರಣೆ ನಡೆಸಿದ ನ್ಯಾ. ಅನಿತಾ.ಎಂ ಗಣೇಶ್ ಸಲ್ಲಿಸಿದ್ದ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಹೀಗಾಗಿ ಶಾಸಕರನ್ನು ಪರಪ್ಪನ ಅಗ್ರಹಾರಕ್ಕೆ ಕರೆತಲಾಗುತ್ತದೆ.
ಇಂದು ಏನಾಯ್ತು?:
ವೈದ್ಯಕೀಯ ತಪಾಸಣೆ ಬಳಿಕ ಶಾಸಕ ಗಣೇಶ್ರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ಊಟದ ಸಮಯವಾದ್ದರಿಂದ ನ್ಯಾಯಾಧೀಶರು ಊಟಕ್ಕೆ ತೆರಳಿದ್ದರು. ಇತ್ತ ಗಣೇಶ್ ಪರ ವಕೀಲರು ಜಾಮೀನು ಅರ್ಜಿ ಹಾಕಲು ಸಕಲ ಸಿದ್ಧತೆ ನಡೆಸಿಕೊಂಡಿದ್ದರು. ಬಳಿಕ ಗಣೇಶ್ ಪರವಾಗಿ ಹಿರಿಯ ವಕೀಲ ಹನುಮಂತರಾಯಪ್ಪ ಅವರ ಜೂನಿಯರ್ ವಕೀಲರು ಹಾಗೂ ಶಾಸಕ ಆನಂದ್ ಸಿಂಗ್ ಪರ ಹೈಕೋರ್ಟ್ ವಕೀಲ ಸಿ.ವಿ.ನಾಗೇಶ್ ಅವರ ಜೂನಿಯರ್ ವಕೀಲರು ನ್ಯಾಯಾಲಯಕ್ಕೆ ಹಾಜರಾದರು.
ಶಾಸಕ ಗಣೇಶ್ ಅವರನ್ನು ಮಧ್ಯಾಹ್ನ 3:45 ಗಂಟೆಯ ಬಳಿಕ ನ್ಯಾಯಾಲಯಕ್ಕೆ ಕರೆತರಲಾಯಿತು. ವಿಚಾರಣೆ ಆರಂಭಿಸಿದ ನ್ಯಾಯಾಧೀಶರಾದ ಅನಿತಾ ಅವರ ಮುಂದೆ ಹಾಜರಾದ ಶಾಸಕ ಗಣೇಶ್, ನನಗೆ ಉಸಿರಾಟದ ತೊಂದರೆ ಇದೆ. ಚಿಕಿತ್ಸೆ ಅಗತ್ಯವಿದ್ದು, ಜಾಮೀನು ನೀಡಬೇಕು ಎಂದು ಕೇಳಿಕೊಂಡರು. ಇದೇ ವೇಳೆ ಗಣೇಶ್ ಪರ ವಕೀಲರು ವಾದ ಮಂಡಿಸಿ, 2016ರಿಂದ ಶಾಸಕರು ಅಸ್ತಮ ತೊಂದರೆಯಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯದ ಉದ್ದೇಶದಿಂದ ಜಾಮೀನು ನೀಡಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.
ವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿ ಗಣೇಶ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv