ಜೈಪುರ: ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಬಾರ್ಮೇರ್ ಸಮೀಪದ ಭಿಲಾನ್ ಕಿ ಧಾನಿ ಎಂಬ ಕುಗ್ರಾಮವನ್ನು ದೇಶದ ಕೊನೆಯ ಗ್ರಾಮ ಎಂದು ಗುರುತಿಸಲಾಗಿದೆ. ಇಲ್ಲಿನ ಬಾಲಕಿಯೊಬ್ಬಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಡೆದು, ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಕಮಲ (16) ಭಾರತದ ಕೊನೆಯ ಗ್ರಾಮದಿಂದ ಎಸ್ಎಸ್ಎಲ್ಸಿ ಪರೀಕ್ಷೆಗೆ ಆಗಮಿಸಿದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ. ಈ ಗ್ರಾಮದಲ್ಲಿ ಸಾಕ್ಷರತೆಯ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇದೆ. ಅಲ್ಲದೆ ಗಡಿಭಾಗದಲ್ಲಿರುವ ಕಾರಣಕ್ಕೆ ಈ ಗ್ರಾಮದಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಓದಲು ಶಾಲೆಗೆ ಕಳುಹಿಸುವುದಿಲ್ಲ. ಆದರೆ ಕಮಲ ಈ ನಿರ್ಬಂಧಗಳನ್ನು ಮೀರಿ ಶಾಲೆಗೆ ಹೋಗಿ 10ನೇ ತರಗತಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಎಂಬ ಕೀರ್ತಿ ಪಡೆದಿದ್ದಾಳೆ.
ಮರುಭೂಮಿಯ ಮಧ್ಯದಲ್ಲಿರುವ ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿದೆ. ಆದರೆ ಈಗ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಹೆಚ್ಚಿನ ಶಿಕ್ಷಣಕ್ಕೆ ಇಲ್ಲಿನ ಮಕ್ಕಳು 6-7 ಕಿ.ಮೀ. ದೂರದಲ್ಲಿರುವ ಗದ್ರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲೆಗೆ ಹೋಗಬೇಕು. ಆದರಿಂದ ಇಷ್ಟು ದೂರ ಹೆಣ್ಣು ಮಕ್ಕಳು ಹೋಗುವುದು ಸುರಕ್ಷಿತವಲ್ಲ. ಅದರಲ್ಲೂ ಈ ಗ್ರಾಮವಿರುವುದು ಗಡಿ ಪ್ರದೇಶದಲ್ಲಿ, ಹೀಗಾಗಿ ಹೆಣ್ಣುಮಕ್ಕಳಿಗೆ ಭದ್ರತೆ ಇರುವುದಿಲ್ಲ ಎಂಬ ಪೋಷಕರ ನಿರ್ಬಂಧದಿಂದ ದಶಕಗಳಿಂದ ಶೇ.90ರಷ್ಟು ಹೆಣ್ಣುಮಕ್ಕಳು ಶಾಲೆಯಿಂದ ದೂರವಿದ್ದಾರೆ.
ಈ ಗ್ರಾಮದಲ್ಲಿ ಒಟ್ಟು 123 ಮನೆಗಳಿವೆ. ಭದ್ರತೆ ಭೀತಿಯಿಂದ ತಮ್ಮ ಹೆಣ್ಣು ಮಕ್ಕಳನ್ನು ದೂರದ ಶಾಲೆಗೆ ಕಳುಹಿಸದೆ ವಿದ್ಯಾಭ್ಯಾಸಕ್ಕೆ ಹೆತ್ತವರು ನಿಷೇಧ ಹೇರಿದ್ದಾರೆ. ಆದರೆ ಕಮಲಾಳ ಪೋಷಕರು ಮಾತ್ರ ಇದನ್ನೆಲ್ಲ ಮೀರಿ ತಮ್ಮ ಮಗಳನ್ನು ಪ್ರೌಢ ಶಾಲೆಗೆ ಧೈರ್ಯದಿಂದ ಕಳುಹಿಸಿದ್ದಾರೆ. ಆದರಿಂದ ಗ್ರಾಮದಿಂದ ರಾಜ್ಯ ಬೋರ್ಡ್ ಪರೀಕ್ಷೆ ಎದುರಿಸಿದ ಮೊದಲ ವಿದ್ಯಾರ್ಥಿನಿ ಎಂಬ ಮೆಚ್ಚುಗೆಗೆ ಕಮಲ ಪಾತ್ರಳಾಗಿದ್ದಾಳೆ.
9ನೇ ತರಗತಿಯಲ್ಲಿದ್ದಾಗ ರಾಜಶ್ರೀ ಯೋಜನೆಯಿಂದ ಉಚಿತ ಸೈಕಲ್ ಪಡೆದಿದ್ದೆ. ಆಗಿನಿಂದಲೂ ಸೈಕಲ್ನಲ್ಲೇ ಶಾಲೆಗೆ ಹೋಗಿ ಬರುತ್ತಿರುವೆ. ಅಲ್ಲದೆ ಕಳೆದ 6 ವರ್ಷದಿಂದ 7-8 ವಿದ್ಯಾರ್ಥಿನಿಯರು ಮಾತ್ರ ಶಾಲೆಗೆ ಆಗಮಿಸುತ್ತಿದ್ದಾರೆ, ಉಳಿದ ಹೆಣ್ಣುಮಕ್ಕಳಲು ವಿದ್ಯೆಯಿಂದ ದೂರ ಉಳಿದಿದ್ದಾರೆ. ಈ ಗ್ರಾಮದಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಆಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಆದರೆ ಈ ಸಾಧನೆ ಮಾಡಿದ ಕೊನೆಯ ವಿದ್ಯಾರ್ಥಿನಿ ನಾನಾಗಬಾರದು. ನಮ್ಮ ಗ್ರಾಮದ ಎಲ್ಲಾ ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯಬೇಕು ಎಂದು ಕಮಲ ಆಶಿಸಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv