– ಕನಕಪುರದಲ್ಲಿ ಮತಾಂತರ ಆಗಿದ್ರೆ ರಾಜೀನಾಮೆ ಕೊಡ್ತೇನೆ
– ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಜಾತಿ, ಧರ್ಮ ಇರಲಿಲ್ಲ
ರಾಮನಗರ: ಭಾರತದ ಇತಿಹಾಸ, ಸಂಸ್ಕೃತಿಯ ಬಗ್ಗೆ ಹೇಳುವಂತಹವರು. ಆದರೆ ಇವರ ಮಕ್ಕಳು ಟ್ರಂಪ್ ಹತ್ತಿರ ಹೋಗಿ ಕೈ ಒಡ್ಡಿಕೊಂಡು ಅಮೆರಿಕಾದಲ್ಲಿ ಕೆಲಸ ಮಾಡ್ತಾರೆ. ಇವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದ ವೇಳೆ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಾಗಿ ಆಪರೇಷನ್ಗೆ ಒಳಗಾಗಿದ್ದ ವೇಳೆ ಜಾತಿಯಿರಲಿಲ್ಲ, ಧರ್ಮ ಬರೋದಿಲ್ಲ. ಅವನ್ಯಾರೋ ಬಾಯಿಗೆ ಬಂದಂಗೆ ಮಾತನಾಡ್ತಾನೆ. ಹಿರಿಯರು ಅಂತಾ ಕಲ್ಲಡ್ಕ ಪ್ರಭಾಕರ್ ಭಟ್ ಬಗ್ಗೆ ಗೌರವವಿದೆ ಎಂದು ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ವಯಸ್ಸಾದ ಮೇಲೆ ಅರಳೋ ಮರಳೋ ಅಂತಾ ನಮ್ಮ ಹಳ್ಳಿಯಲ್ಲಿ ಅಂತಾರೆ. ಹಾಗೇ ಅರಳೋ ಮರಳೋ ಕಾಲದಲ್ಲಿ ಎಲ್ಲಿರಬೇಕು ಅಂದ್ರೆ ತಲೆ ಕೆಟ್ಟಿರೋರ್ ಜಾಗದಲ್ಲಿರಬೇಕು. ಅವರ ಹೆಸರೇ ತಲೆ ಕೆಟ್ಟಿರೋರು. ಇಂತಹವರೆಲ್ಲ ಬಂದು ಕನಕಪುರದಲ್ಲಿ ಭಾಷಣ ಮಾಡಿಬಿಟ್ಟು ಹೋಗೋದು. ಕ್ರಿಶ್ಚಿಯನ್ ದೇಶದಲ್ಲಿ ಹೋಗಿ ಇವರ ಮಕ್ಕಳು ಕೈ ಒಡ್ಡುವುದು ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಡಿಕೆ ಸುರೇಶ್ ಕಿಡಿಕಾರಿದ್ದಾರೆ.
ಇವರು ಚಿಲ್ಲರೇ ರಾಜಕೀಯ, ನೀಚ ಹೊಲಸಿನ ಭಾಷೆಯಲ್ಲಿ ಮಾತನಾಡುವ ಸಂಸ್ಕೃತಿ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಕೆಂಪು ಬಟ್ಟೆ ಹಾಕಿಕೊಂಡ್ರೆ ಮಾತ್ರ ಹಿಂದೂಗಳು, ಇಲ್ಲ ಅಂದ್ರೆ ಬೇರೆಯವರು ಹಿಂದೂಗಳು ಅಲ್ಲವಾ? ಬಿಜೆಪಿ ಜೊತೆಗಿದ್ದರೆ ಮಾತ್ರ ಹಿಂದುಗಳಾ? ಕೇಸರಿ ಟವಲ್ ಹಾಕಿಕೊಂಡ್ರೆ ಮಾತ್ರ ಹಿಂದುಗಳಾ ಎಂದು ಪ್ರಶ್ನಿಸಿದ್ರು. ರಾಜಕೀಯ ಕಾರಣಕ್ಕಾಗಿ ಕನಕಪುರದಲ್ಲಿ ಬೆಂಕಿ ಹಚ್ಚಬೇಕು. ರಾಮನಗರ ಜಿಲ್ಲೆಯಲ್ಲಿ ಏನೋ ಸಾಧನೆ ಮಾಡಬೇಕು ಅಂತೇಳಿ. ನಾನು ಒಬ್ಬ ಗೆದ್ದಿದ್ದೇನೆ ಅಂತಾ ನನ್ನ ಹೆಸರನ್ನ ಹೇಳ್ತೀರಿ ಎಂದು ಕಿಡಿಕಾರಿದರು.
ಮತಾಂತರ ಮಾಡಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ಸಿದ್ಧನಿದ್ದೇನೆ. ನಾನು ಮತ್ತು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಇಷ್ಟು ವರ್ಷಗಳ ಅಧಿಕಾರ ಮತ್ತು ರಾಜಕೀಯ ಜೀವನದಲ್ಲಿ ಒಬ್ಬನೇ ಒಬ್ಬ ಹಿಂದುವನ್ನು ಮತಾಂತರ ಮಾಡಿದ್ದನ್ನು ತೋರಿಸಿದರೆ ನಾನು ರಾಜಕೀಯವಾಗಿ ಸನ್ಯಾಸ ಸ್ವೀಕರಿಸುತ್ತೇವೆ ಎಂದು ಸವಾಲು ಹಾಕಿದರು.
ಕನಕಪುರದಲ್ಲಿ ಬಂದು ಭಾಷಣ ಮಾಡ್ತಾರೆ, ಬೊಗಳುವ ನಾಯಿ ಕಚ್ಚುವುದಿಲ್ಲ ಎಂದು ಗಾದೆ ಮಾತು ನಾನು ಹೇಳಿದ್ದಲ್ಲ. ನಾಲಿಗೆಗೆ ಮೂಳೆ ಇಲ್ಲ ಎಂದು ಬಾಯಿಗೆ ಬಂದದ್ದನ್ನೆಲ್ಲಾ ಮಾತನಾಡುವುದಲ್ಲ, ಗಾಂಧೀಜಿ ಶಾಂತಿ ತತ್ವ ಹೇಳಿದರು. ಅಂಬೇಡ್ಕರ್ ಸಮಾನತೆ ಸಾರಿದರು. ಬಸವಣ್ಣ ಮನುಷ್ಯ ಧರ್ಮ ಅಂತೇಳಿದ್ರು. ಈ ಮೂರನ್ನು ಬಿಟ್ಟವರು ಯಾರು ಇವರು? ಈ ಮೂರು ಲೆಕ್ಕ ಇಲ್ಲ. ಗಾಂಧೀಜಿ ಹೆಸರು ಹೇಳ್ತಾರೆ ಅದ್ರೆ ಅವರ ತತ್ವವಿಲ್ಲ, ಬಸವಣ್ಣನ ಪೂಜೆ ಮಾಡ್ತಾರೆ ಅವರ ಆದರ್ಶಗಳಿಲ್ಲ. ಅಂಬೇಡ್ಕರ್ರ ಸಂವಿಧಾನದ ಬಗ್ಗೆ ಹೊಗಳುವಂತ ಮಾತಾಡ್ತಾರೆ ಗೌರವಿಸುವುದಿಲ್ಲ. ಇವರು ಬಂದು ನಮಗೆ ಹಿತವಚನ ಹೇಳುವಂತಹ ಕೆಲಸ ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದರು.