ಧಾರವಾಡ: 2015ರ ಆಗಸ್ಟ್ನಲ್ಲಿ ಹಂತಕರ ಗುಂಡಿಗೆ ಬಲಿಯಾಗಿದ್ದ ಹಿರಿಯ ಸಂಶೋಧಕ ಡಾ.ಎಂ.ಎಂ ಕಲಬುರ್ಗಿ ಕೊಲೆ ಆರೋಪಿಗಳನ್ನು ಇಂದು ಧಾರವಾಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಆರೋಪಿಯೋರ್ವ ನಾವು ಅಮಾಯಕರು ಎಂದು ಹೇಳಿಕೊಂಡಿದ್ದಾನೆ.
6 ಕೊಲೆ ಆರೋಪಿಗಳಲ್ಲಿ ನಾಲ್ವರನ್ನು ಕರೆ ತಂದಿದ್ದ ಪೊಲೀಸರು, ಧಾರವಾಡ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಹುಬ್ಬಳ್ಳಿಯ ಅಮೀತ್ ಬದ್ದಿ, ಧಾರವಾಡದ ಗಣೇಶ್ ಮಿಸ್ಕಿನ್, ಮಹಾರಾಷ್ಟ್ರದ ವಾಸುದೇವ ಸೂರ್ಯವಂಶಿ ಹಾಗೂ ಬೆಳಗಾವಿಯ ಪ್ರವೀಣ್ ಚತೂರನನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಡಿಸೆಂಬರ್ 21 ಹಾಗೂ 22 ರಂದು ಕಲಬುರ್ಗಿ ಅವರ ಕೊಲೆ ಆರೋಪಿಗಳ ಸಾಕ್ಷಿ ವಿಚಾರಣೆ ಆರಂಭವಾಗಲಿದೆ. ಹೀಗಾಗಿ ನ್ಯಾಯಾಲಯ 21 ಹಾಗೂ 22 ರಂದು ಮತ್ತೇ ಆರೋಪಿಗಳನ್ನು ಹಾಜರು ಪಡಿಸಲು ಸೂಚನೆ ನೀಡಿದೆ. ಇದನ್ನೂ ಓದಿ: ನಾವು ತಪ್ಪು ಮಾಡಿಲ್ಲ, ನ್ಯಾಯ ಕೊಡಿಸಿ- ಕಲಬುರ್ಗಿ ಹತ್ಯೆ ಆರೋಪಿಗಳ ಕೂಗು
ಆರೋಪಿ ಅಮೀತ್ ಬದ್ದಿ, ನಾವು ಅಮಾಯಕರು ಎಂದು ಹೇಳುತ್ತ ಪೊಲೀಸರ ವಾಹನ ಹತ್ತಿದರೆ, ಮತ್ತೋರ್ವ ಆರೋಪಿ ವಾಸುದೇವ, ನಾವು ಅಮಾಯಕರು, ಬಡ ಹಿಂದೂಗಳನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೇ ನಮಗೆ ಪ್ರಜಾ ಪ್ರಭುತ್ವದಲ್ಲಿ ನಂಬಿಕೆ ಇದೆ, ಎಸ್ಐಟಿ ನಮ್ಮನ್ನು ಇದರಲ್ಲಿ ಸಿಲುಕಿಸಿದೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ಪೈಪ್, ಬಕೆಟ್ನಲ್ಲಿ ಫುಲ್ ಹಣ – ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಈಗಾಗಲೇ ಇದೇ ಆರೋಪಿಗಳು ಮಹಾರಾಷ್ಟ್ರದ ಚಿಂತಕ ಪನ್ಸಾರೆ ಹಾಗೂ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟಿದ್ದಾರೆ. ನ್ಯಾಯಾಲಯದ ಒಳಗೆ ಪ್ರಶ್ನೆಗಳಿಗೆ ಮರಾಠಿಯಲ್ಲಿ ಉತ್ತರಿಸುತ್ತಿದ್ದ ಆರೋಪಿಗಳಿಗೆ ನ್ಯಾಯಾಧೀಶರು ಬೆಳಗಾವಿಯವರಾದ ನೀವು ಕನ್ನಡ ಯಾಕೆ ಮಾತನಾಡಲ್ಲ ಎಂದು ಪ್ರಶ್ನೆ ಮಾಡಿದ ಪ್ರಸಂಗವು ವಿಚಾರಣೆ ವೇಳೆ ನಡೆಯಿತು.