ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ನಿಂದ ರಾಜ್ಯವೇ ಬೆಚ್ಚಿ ಬೀಳುತ್ತಿದೆ. ಅದರಲ್ಲೂ ಕಲಬುರಗಿ ಜಿಲ್ಲೆ ಡೇಂಜರ್ ಝೂನ್ನಲ್ಲಿದೆ. ಕಲಬುರಗಿ ಜನರ ಆತಂಕ ದೂರ ಮಾಡಬೇಕಿದ್ದ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಲಬುರಗಿಗೆ ಕಾಲೇ ಇಟ್ಟಿಲ್ಲ. ಗೋವಿಂದ ಕಾರಜೋಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜನ ಗರಂ ಆಗಿದ್ದು, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಕೊರೊನಾ ಭೀತಿ ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಮೊದಲ ಬಲಿ ರಾಜ್ಯದಲ್ಲೇ ಆಗಿದೆ. ಮೃತಪಟ್ಟ ಕೊರೊನಾ ಪೀಡಿತ ವ್ಯಕ್ತಿ ಕಲಬುರಗಿಯವರಾಗಿದ್ದು, ಇಡೀ ಜಿಲ್ಲೆ ಡೇಂಜರ್ ಝೂನ್ನಲ್ಲಿದೆ. ಕಲಬುರಗಿ ಜನ ಆತಂಕದಲ್ಲಿದ್ದಾರೆ. ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಕಾಲಿಟ್ಟಿಲ್ಲ, ಕಾಣೆಯಾಗಿದ್ದಾರೆ ಎಂದು ಜನ ಸಾಮಾಜಿಕ ಜಾಲತಾಣಗಳಲ್ಲಿ ಗರಂ ಆಗಿದ್ದಾರೆ.
ಕಲಬುರಗಿ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳಗೆ ‘ಭಾವಪೂರ್ಣ ಶ್ರದ್ಧಾಂಜಲಿ’, ‘ಗೋವಿಂದ ಕಾರಜೋಳ ಗೋವಿಂದ ನಾಮ ಹಾಡುತ್ತಿದ್ದಾರೆ’, ‘ಗೋವಿಂದ ಕಾರಜೋಳ ಎಲ್ಲಿ ಅಡಗಿ ಕುಳಿತಿದ್ದಾರೆ ನೋಡ್ರಿ ಸ್ವಾಮಿ’, ‘ಇಂತಹವರು ನಾಯಕರು ನಮಗೆ ಬೇಕಾ’ ಎಂದು ಜನರು ಬರದು ಪೋಸ್ಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಹೀಗಿದ್ದರು ಸಹ ಗೋವಿಂದ ಕಾರಜೋಳ ಜಿಲ್ಲೆ ಕಾಲಿಟ್ಟಿಲ್ಲ.
ಆರೋಗ್ಯ ಸಚಿವರಾದ ಶ್ರೀರಾಮುಲು ಕಲಬುರಗಿಗೆ ಭೇಟಿ ನೀಡಿ ಖುದ್ದು ಸಮಸ್ಯೆಯನ್ನು ವೀಕ್ಷಣೆ ಮಾಡಿದ್ದಾರೆ. ಆದರೆ ಗೋವಿಂದ ಕಾರಜೋಳ ಭೇಟಿ ನೀಡದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದಾರೆ. ಕಲಬುರಗಿಗೆ ಭೇಟಿ ಕೊಡುತ್ತಿರಾ ಎಂದು ಕಾರಜೋಳ ಅವರನ್ನು ಪ್ರಶ್ನಿಸಿದರೆ ಅವರು ಯಾವುದೇ ಉತ್ತರ ನೀಡುತ್ತಿಲ್ಲ.