ಕಲಬುರಗಿ: ಶರಣರ ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿಯಲ್ಲಿ ಶ್ರೀ ಶರಣಬವೇಶ್ವರ ಜಾತ್ರೆ ನಡೆಯಲಿದೆ. ಆದರೆ ಈ ಬಾರಿಯ ಶರಣರ ಜಾತ್ರೆಗೂ ಭೀಕರ ಕೊರೊನಾ ಎಫೆಕ್ಟ್ ಎದುರಾಗಿದ್ದು, ಕೆಮ್ಮು, ಶೀತ, ಜ್ವರ ಇರುವ ಭಕ್ತರು ಜಾತ್ರೆಗೆ ಬರದಂತೆ ಜಿಲ್ಲಾಧಿಕಾರಿ ಬಿ. ಶರತ್ ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲಿ ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತಿದೆ. ಈ ಜಾತ್ರೆಗೆ 1 ಲಕ್ಷಕ್ಕೂ ಹೆಚ್ಚು ಭಕ್ತರು ತೇರು ಎಳೆಯಲು ಆಗಮಿಸುತ್ತಾರೆ. ಆದರೆ ಹೀಗೆ ಆಗಮಿಸುವ ಭಕ್ತರಿಗೆ ಇದೀಗ ಚೀನಾದ ಮಹಾಮಾರಿ ಕೊರೊನಾ ಕರಿನೆರಳು ಆವರಿಸಿದೆ. ಹೀಗಾಗಿ ಜಾತ್ರೆಗೆ ಬರುವ ಭಕ್ತರು ಒಂದಿಷ್ಟು ಮುಂಜಾಗೃತೆ ವಹಿಸಿಕೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ. ಕೆಮ್ಮು, ಜ್ವರ, ಶೀತದಿಂದ ಬಳಲುತ್ತಿರುವ ಭಕ್ತರು ಜಾತ್ರೆಗೆ ಬರಬೇಡಿ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಮನವಿ ಮಾಡಿದ್ದಾರೆ. ಈ ಮೂಲಕ ಯಾರಿಗಾದರೂ ಸೊಂಕು ಇದ್ದಲಿ ಅದು ಬೇರೆಯವರಿಗೆ ಹರಡದಿರಲಿ ಎಂಬ ಕಾರಣಕ್ಕೆ ಈ ಕ್ರಮ ಜರುಗಿಸಿರುವುದಾಗಿ ಡಿಸಿ ಬಿ.ಶರತ್ ಅವರು ಹೇಳಿದ್ದಾರೆ.
ಶರಣಬಸವೇಶ್ವರ ಜಾತ್ರೆ ಇಂದಿನಿಂದ ಪ್ರಾರಂಭವಾಗಿ 13 ದಿನಗಳ ಕಾಲ ನಡೆಯಲಿದ್ದು, ಈ ವೇಳೆ ಕನಿಷ್ಟ ಅಂದ್ರು 4 ಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಆಗಮಿಸಿ ಶರಣನ ದರ್ಶನ ಪಡೆಯಲ್ಲಿದ್ದಾರೆ. ಹೀಗಾಗಿ ಅಷ್ಟು ಜನರ ಆರೋಗ್ಯದ ಜವಾಬ್ದಾರಿಯನ್ನು ಇದೀಗ ಜಿಲ್ಲಾಡಳಿತ ಹೊತ್ತುಕೊಂಡಿದೆ. ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮ ಸ್ವಾಗತ ಆದರೆ ಕೊರೊನಾ ಬಗ್ಗೆ ಜಾಗೃತಿ ಸಹ ಮೂಡಿಸಲಿ ಎನ್ನುವುದು ಭಕ್ತರ ಮನವಿಯಾಗಿದೆ.
ಜಾತ್ರೆಯಲ್ಲಿ ಆರೋಗ್ಯ ಇಲಾಖೆಯ ಒಂದು ತಂಡ ಸಹ ಸ್ಥಳದಲ್ಲಿಯೇ ಠಿಕಾಣಿ ಹೂಡಿ ಭಕ್ತರ ಮೇಲೆ ಒಂದು ಕಣ್ಣಿಡಲಿದೆ. ಈ ವೇಳೆ ಯಾರಿಗಾದರೂ ಕೆಮ್ಮು, ಶೀತ, ಜ್ವರದ ಲಕ್ಷಣ ಕಂಡರೆ ಅಲ್ಲಿಯೇ ಅವರ ಆರೋಗ್ಯ ತಪಾಸಣೆಗೆ ಸಿದ್ಧತೆ ಮಾಡಿಕೊಂಡಿದೆ. ಈ ಮೂಲಕ ಕೊರೊನಾ ವೈರಸ್ಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇದೀಗ ಮುಂದಾಗಿದೆ.