ಕಲಬುರಗಿ: ನೀತಿ ಸಂಹಿತೆ ಹಿನ್ನೆಲೆಯಲ್ಲಿ ಒಂದೆಡೆ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಚುನಾವಣೆಯಲ್ಲಿ ಬ್ಯುಸಿಯಾಗಿದ್ದರೆ, ಸಿಕ್ಕಿದ್ದೇ ಚಾನ್ಸ್ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ಕೋಟಿ ಕೋಟಿ ಬೇಕಾಬಿಟ್ಟಿ ಬಿಲ್ ಮಾಡಿ ಹಣ ಲಪಟಾಯಿಸಿದ್ದಾರೆ. ಬಂದ ದುಡ್ಡಲ್ಲಿ ಕುಡಿದು ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತ ಒಂದು ಎಕ್ಸ್ ಕ್ಲೂಸಿವ್ ರಿಪೋರ್ಟ್ ಇಲ್ಲಿದೆ.
ಹೌದು. ಪಿಡಬ್ಲ್ಯೂಡಿ ಅಧಿಕಾರಿಗಳು 2018-19ರ ಇಯರ್ ಎಂಡ್ ಬಿಲ್ ಮಾಡಿ ತಮಗೆ ಬೇಕಾದಂತೆ ನಕಲಿ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಮಾತ್ರವಲ್ಲ ವಂಚಿಸಿದ ಹಣದಲ್ಲಿ ಕಲಬುರಗಿಯ ಖಾಸಗಿ ಹೋಟೆಲ್ನಲ್ಲಿ ಕಾಕ್ಟೈಲ್ ಎಣ್ಣೆ ಪಾರ್ಟಿ ಮಾಡಿದ್ದು, ಆ ಪಾರ್ಟಿಯಲ್ಲಿ ಯಾರು ಎಷ್ಟು ಹಣ ಹೊಡೆದರು ಅನ್ನೋ ಲೆಕ್ಕವನ್ನು ಪರಸ್ಪರ ಹೇಳಿಕೊಂಡು ಸ್ಟೆಪ್ ಹಾಕಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ್ ಆರೋಪಿಸಿದ್ದಾರೆ.
ಆರ್ಟಿಐ ಮಾಹಿತಿಯಡಿ ಭ್ರಷ್ಟ ಅಧಿಕಾರಿಗಳ ನಿಜ ಬಣ್ಣ ಬಯಲಾಗಿದ್ದು, 3 ಕೋಟಿಗೂ ಅಧಿಕ ಹಣದ ಬೋಗಸ್ ಬಿಲ್ ಮಾಡಿದ್ದಾರೆ.
1. ಜಿಲ್ಲಾಧಿಕಾರಿಗಳ ವಸತಿಗೃಹದ ಬಾಗಿಲು, ಕಿಟಕಿಯ ಪರದೆ- 3 ಲಕ್ಷ ರೂ.
2. ಜಿಲ್ಲಾಧಿಕಾರಿಗಳ ವಸತಿಗೃಹದ ಪಾರ್ಕ್ ನ ಫಿನಿಶಿಂಗ್- 2 ಲಕ್ಷ ರೂ.
3. ಜೇವರ್ಗಿ ರಸ್ತೆಯ ವಸತಿ ಪ್ರದೇಶದ 5 ಚಿಕ್ಕ ಸೇಫ್ಟಿ ಟ್ಯಾಂಕ್ ಸ್ವಚ್ಛತೆ- 3.30 ಲಕ್ಷ ರೂ.
4. ಐವಾನ್-ಏ-ಶಾಹಿ ವಸತಿಗೃಹದ ಸೊಳ್ಳೆ ಪರದೆ- 5 ಲಕ್ಷ ರೂ.
5. ಐವಾನ್-ಏ-ಶಾಹಿ ವಸತಿಗೃಹದ ಮುಳ್ಳು ಕಂಟಿ ತೆಗೆಯಲು- 5 ಲಕ್ಷ ರೂ.
6. ಐವಾನ್-ಏ-ಶಾಹಿ ವಸತಿಗೃಹದ ಸೋಫಾ ರಿಪೇರಿಗೆ- 3 ಲಕ್ಷ ರೂ.
7. ಐವಾನ್-ಏ-ಶಾಹಿ ವಸತಿಗೃಹದ ಸ್ನಾನಗೃಹದ ನವೀಕರಣ- 4 ಲಕ್ಷ ರೂ
8. ಐವಾನ್-ಏ-ಶಾಹಿ ವಸತಿಗೃಹದಲ್ಲಿ ಟವೆಲ್ & ನ್ಯಾಪ್ಕಿನ್ ಖರೀದಿ- 4 ಲಕ್ಷ ರೂ
9. ಮೇಲ್ಛಾವಣಿಯ ಪೇಟಿಂಗ್- 2 ಲಕ್ಷ 35 ಸಾವಿರ ರೂ.
10. ಪಿಡಬ್ಲ್ಯೂಡಿ ಕಚೇರಿಯ ಸಿಇ-ಎಸ್ಇ ಎರಡು ಕಚೇರಿಗಳ ಪಾರ್ಕ್ ನವೀಕರಣ- 10 ಲಕ್ಷ ರೂ.
ಒಟ್ಟಿನಲ್ಲಿ ಒಂದೆಡೆ ಭೀಕರ ಬರ, ಮತ್ತೊಂದೆಡೆ ರೈತರ ಸಾಲಮನ್ನಾಕ್ಕೆ ಹಣ ಇಲ್ಲದೇ ಸರ್ಕಾರ ಪರದಾಡುತ್ತಿದೆ. ಆದರೆ ಇತ್ತ ಅಧಿಕಾರಿಗಳು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಈಗಲಾದರೂ ಸಿಎಂ ಕುಮಾರಸ್ವಾಮಿ ಎಚ್ಚೆತ್ತು ಭ್ರಷ್ಟಾಚಾರದ ತನಿಖೆ ಮಾಡಿಸ್ತಾರಾ ಕಾದು ನೋಡಬೇಕಿದೆ.