– ಶೈಕ್ಷಣಿಕ ಪ್ರವಾಸಕ್ಕೆ ಬಂದಾಗ ದುರ್ಘಟನೆ
ಕಲಬುರಗಿ: ಶಿಕ್ಷಕರ ಕಣ್ಣು ತಪ್ಪಿಸಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಮಲಾಪುರ ತಾಲೂಕಿನ ಬೆಳಕೋಟಾ ಕೆರೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸತ್ಯಸಾಯಿ ಶಾಲೆಯ ಲಕ್ಮಣ ಭೀಮರಾಯ ಡೊಣ್ಣುರ, ಶುಭಂ ಸೋಸುರ ಮತ್ತು ಮಂಜುನಾಥ ಮೃತ ವಿದ್ಯಾರ್ಥಿಗಳು. ಶೈಕ್ಷಣಿಕ ಪ್ರವಾಸಕ್ಕೆ ಬಂದಾಗ ದುರ್ಘಟನೆ ನಡೆದಿದೆ.
ಇಂಡಿ ತಾಲೂಕಿನ ಸತ್ಯಸಾಯಿ ಶಾಲೆಯ ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ಕಮಲಾಪುರದ ಸತ್ಯಸಾಯಿ ಶಾಲೆಗೆ ಬಂದಿದ್ದರು. ಈ ವೇಳೆ ಲಕ್ಮಣ, ಶುಭಂ ಹಾಗೂ ಮಂಜುನಾಥ ಮೂವರು ಸೇರಿ ಶಿಕ್ಷಕರ ಕಣ್ಣು ತಪ್ಪಿಸಿ ಬೆಳಕೋಟಾ ಕೆರೆಗೆ ಈಜಲು ಹೋಗಿದ್ದರು. ಆದರೆ ಮೂವರಲ್ಲಿ ಯಾರಿಗೂ ಸಹ ಈಜು ಬಾರದಿದ್ದರೂ ನೀರಿಗೆ ಇಳಿದು ಮೋಜು ಮಾಡಲು ಮುಂದಾಗಿದ್ದರು. ಈ ವೇಳೆ ಆಳವಾದ ನೀರನ್ನು ಅರಿಯದ ವಿದ್ಯಾರ್ಥಿಗಳು ಈಜಲು ಯತ್ನಿಸಿದ ಪರಿಣಾಮ ಒಬ್ಬರ ನಂತರ ಒಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳು ನೀರಿನಲ್ಲಿ ಬಿದ್ದಿರುವುದು ಬೆಳಕೋಟಾ ಗ್ರಾಮದ ಜನರ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಹಾಗೂ ಗ್ರಾಮಸ್ಥರು ಬಾಲಕರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.