ಬೆಂಗಳೂರು: ನಮಗೆ ಯಾರು ಮೇಯರ್ ಸ್ಥಾನವನ್ನು ನೀಡುತ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಕಲಬುರಗಿಯ ಪಾಲಿಕೆಯ ಜೆಡಿಎಸ್ ಸದಸ್ಯ ನಾಸೀರ್ ಹುಸೇನ್ ಹೇಳಿದ್ದಾರೆ.
ಇಂದು ಕಲಬುರಗಿ ಪಾಲಿಕೆ ಸದಸ್ಯರು ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಾಸೀರ್ ಹುಸೇನ್, ನಾವು ಮೇಯರ್ ಸ್ಥಾನವನ್ನು ಕೇಳಿದ್ದೇವೆ. ಯಾರು ನಮಗೆ ಮೇಯರ್ ಸ್ಥಾನ ಕೊಡುತ್ತಾರೋ ಅವರ ಜೊತೆ ಹೋಗುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಲಬುರಗಿ ಪಾಲಿಕೆ ಮೈತ್ರಿ ವಿಚಾರವಾಗಿ ಖರ್ಗೆ ನನಗೆ ಕಾಲ್ ಮಾಡಿದ್ರು: ಎಚ್ಡಿಡಿ
ಈ ವಿಚಾರದಲ್ಲಿ ವರಿಷ್ಠರ ನಿರ್ಣಯ ಅಂತಿಮ. ಹೆಚ್ಡಿ ದೇವೇಗೌಡರು ನಮಗೆ ಸುಪ್ರೀಂ. ಹೀಗಾಗಿ ಇಂದು ಭೇಟಿಯಾಗಿದ್ದೇವೆ. ಈ ಸಂದರ್ಭದಲ್ಲಿ ನಾವು ಏನೂ ಹೇಳುವುದಿಲ್ಲ. ಎರಡು ಪಕ್ಷಗಳು ಹೇಳಬೇಕಾಗುತ್ತದೆ ಎಂದರು.
ಬಿಜೆಪಿಯಿಂದ ಬಂಡಾಯ ಎದ್ದು ಗೆದ್ದ ಅಭ್ಯರ್ಥಿ ಕೂಡ ನಮ್ಮ ಜೊತೆ ಇದ್ದಾರೆ. ಅವರೂ ಕೂಡ ನಮ್ಮ ಸಂಪರ್ಕದಲ್ಲಿಯೇ ಇದ್ದಾರೆ. ನಮ್ಮದು ಏನಿಲ್ಲ ಇನ್ನು ಏನಿದ್ದರೂ ಕಾಂಗ್ರೆಸ್, ಬಿಜೆಪಿ ನಾಯಕರು ತೀರ್ಮಾನ ಮಾಡಬೇಕು ಅಷ್ಟೇ ಎಂದು ಹೇಳಿದರು. ಇದನ್ನೂ ಓದಿ: ಚಾರ್ಜ್ ಶೀಟ್ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ
ಇವತ್ತು ನಾವು ನಾಲ್ಕು ಮಂದಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿಗಳ ಭೇಟಿ ಮಾಡಿ ಚರ್ಚಿಸಿದ್ದೇವೆ. ಮೈತ್ರಿಗೆ ಜೆಡಿಎಸ್ ಒಪ್ಪಿಗೆ ನೀಡಿದ್ದು, ಮೊದಲ ಅವಧಿಗೆ ನಮಗೆ ಮೇಯರ್ ಸ್ಥಾನ ಕೇಳಲು ನಿರ್ಧರಿಸಿದ್ದೇವೆ. ನಮ್ಮ ಬೇಡಿಕೆಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮುಂದೆ ಇಡುತ್ತೇವೆ. ಯಾವ ಪಕ್ಷ ಬೇಡಿಕೆ ಒಪ್ಪುತ್ತೋ ಅದಕ್ಕೆ ನಮ್ಮ ಬೆಂಬಲ ಎಂದು ನಾಸೀರ್ ಹುಸೇನ್ ಸ್ಪಷ್ಟಪಡಿಸಿದರು.
ಯಾರಿಗೆ ಎಷ್ಟು ಸ್ಥಾನ ಸಿಕ್ಕಿದೆ?
ಒಟ್ಟು 63 ಸ್ಥಾನಗಳಿದ್ದು ಬಹುಮತಕ್ಕೆ 32 ಮತಗಳು ಬೇಕಿದೆ. ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 04, ಒಬ್ಬರು ಪಕ್ಷೇತರ (ಬಿಜೆಪಿ ಬಂಡಾಯ ಅಭ್ಯರ್ಥಿ) ಸದಸ್ಯರು ಗೆದ್ದುಕೊಂಡಿದ್ದಾರೆ. 1 ಎಂಎಲ್ಎ, 1 ರಾಜ್ಯಸಭಾ ಸದಸ್ಯರಿಂದಾಗಿ ಕಾಂಗ್ರೆಸ್ ಮತಗಳ ಸಂಖ್ಯೆ 29ಕ್ಕೆ ಏರಿಕೆಯಾದರೆ, 2 ಶಾಸಕರು, 1 ಸಂಸದರು, 3 ಎಂಎಲ್ಸಿಗಳು ಸೇರಿ 6 ಮತ ಸಿಗುವ ಕಾರಣ ಬಿಜೆಪಿಗೂ 29 ಮತಗಳು ಸಿಗಲಿದೆ. ಜೆಡಿಎಸ್ ಕಿಂಗ್ ಮೇಕರ್ ಆಗಿದೆ.