ಕಲಬುರಗಿ: ರಾಜ್ಯದ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಬಹುತೇಕ ರೈತರಿಗೆ ಋಣಮುಕ್ತ ಪತ್ರ ನೀಡಿದೆ. ಆದರೆ ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಸಾಲ ಮನ್ನಾ ಮಾಡಿದರೂ ರೈತರ ಖಾತೆಗಳಿಗೆ ಇಂದಿಗೂ ಹಣ ತಲುಪಿಲ್ಲ.
ಹೌದು. ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ರೈತರು ಡಿಸಿಸಿ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದರು. ಸರ್ಕಾರ ರೈತರ ಸಾಲಮನ್ನಾಕ್ಕಾಗಿ 150 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಆದರೆ ಡಿಸಿಸಿ ಬ್ಯಾಂಕ್ನ ಅಧಿಕಾರಿಗಳು ನಕಲಿ ರೈತರನ್ನು ಸೃಷ್ಟಿಸಿ ಅಪೆಕ್ಸ್ ಬ್ಯಾಂಕ್ನಲ್ಲಿ ಸಾಲ ಎತ್ತಿದ್ದಾರೆ. ಹೀಗಾಗಿ ಇದೀಗ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಅಪೆಕ್ಸ್ ಬ್ಯಾಂಕ್ ಡಿಸಿಸಿ ಬ್ಯಾಂಕ್ ಮಾಡಿದ್ದ ಸಾಲಕ್ಕೆ ವಜಾ ಮಾಡಿಕೊಂಡಿದೆ ಎಂದು ಬಿಜೆಪಿ ಶಾಸಕ ರಾಜಕುಮಾರ್ ತೇಲ್ಕೂರ್ ತಿಳಿಸಿದ್ದಾರೆ.
ಈ ಹಿಂದೆ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರು ಮತ್ತು ನಿರ್ದೇಶಕರು ರೈತರ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದರು. ಇಲ್ಲಿವರೆಗೂ ಭ್ರಷ್ಟರ ವಿರುದ್ಧ ಕ್ರಮ ಆಗಿಲ್ಲ. ಇನ್ನು ಈ ಬಗ್ಗೆ ಸಿಎಂ ಗಮನಕ್ಕೆ ತಂದಾಗ ಈ ಎರಡೂ ಜಿಲ್ಲೆಯ ರೈತರ ಸಾಲಮನ್ನಾ ಮಾಡಲು ಹೆಚ್ಚುವರಿ 200 ಕೋಟಿ ಹಣ ಬಿಡುಗಡೆ ಮಾಡುತ್ತೇನೆ. ರೈತರ ಹೆಸರಲ್ಲಿ ಗೋಲ್ಮಾಲ್ ಮಾಡಿದವರನ್ನು ಜೈಲಿಗೆ ಕಳುಹಿಸುತ್ತೀನಿ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ.
ದುರಂತ ಅಂದ್ರೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತವರಲ್ಲೇ ಈ ಗೋಲ್ಮಾಲ್ ನಡೆದಿದೆ. ಹೀಗಿರುವಾಗ ಭ್ರಷ್ಟರ ಮೇಲೆ ಸರ್ಕಾರ ಕ್ರಮ ಜರುಗಿಸುತ್ತಾ ಕಾದು ನೋಡಬೇಕಿದೆ.