ಕಲಬುರಗಿ: ನಿಂತ ರೈಲಿನ ಕೆಳಗಿನಿಂದ ಹಳಿ ದಾಟಲು ಹೋಗಿ ರೈಲಿನ ಅಡಿ ಸಿಲುಕಿದ್ದ ಅಜ್ಜಿಯೊಬ್ಬಳು ರೈಲಿನ ಎಲ್ಲಾ ಬೋಗಿಗಳು ಹೋಗುವವರೆಗೆ ತಲೆ ಬಗ್ಗಿಸಿ ಕುಳಿತು ಬದುಕುಳಿದ ಅಪರೂಪದ ಘಟನೆ ಜಿಲ್ಲೆಯ ಚಿತ್ತಾಪೂರ ರೈಲ್ವೇ ಸ್ಟೇಷನ್ನಲ್ಲಿ ನಡೆದಿದೆ.
ಚಿತ್ತಾಪೂರ ರೈಲ್ವೇ ಸ್ಟೇಷನ್ ಪಕ್ಕದ ತಾಂಡಾ ನಿವಾಸಿ 70 ವರ್ಷದ ಮಾನಿಬಾಯಿ ರೈಲು ಬೋಗಿಗಳ ಕೆಳಗೆ ಸಿಲುಕಿದ್ದ ಅಜ್ಜಿ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ನಲ್ಲಿ ಸರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವಾಟ್ಸಪ್, ಫೇಸ್ಬುಕ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚಿತ್ತಾಪೂರ ರೈಲ್ವೇ ಸ್ಟೇಷನ್ನಿಂದ ಪಕ್ಕದ ತಾಂಡಾಗೆ ಹೋಗಲು ಓವರ್ ಬ್ರಿಡ್ಜ್ ಇಲ್ಲ. ಹೀಗಾಗಿ ಅಜ್ಜಿ ಮಾನಿಬಾಯಿ ಹೇಗೂ ರೈಲು ನಿಂತಿದೆ, ಕೆಳಗಡೆಯಿಂದಲೇ ಹಳಿ ದಾಟಿದರಾಯಿತೆಂದು ರೈಲಿನ ಕೆಳಗಡೆ ಹೋಗಿದ್ದಾಳೆ. ಇನ್ನೇನೂ ಹಳಿ ದಾಟಬೇಕು ಎನ್ನುವಷ್ಟರಲ್ಲಿ ರೈಲು ಹೊರಡು ಹಾರ್ನ್ ಕೇಳಿಸಿದೆ. ಅಬ್ಬಾ! ಜೀವ ಹೋಗಿಯೆಂದು ಅಜ್ಜಿ ಕಣ್ಣು ಮುಚ್ಚಿ ಹಳಿಯ ಮಧ್ಯದಲ್ಲಿ ತಲೆ ತಗ್ಗೆಸಿ ನೆಲಕ್ಕೊರಗಿದ್ದಾಳೆ.
ಅಕ್ಕಪಕ್ಕದವರು ವಿಪರೀತವಾಗಿ ಕೂಗಿಕೊಂಡಿದ್ದಾರೆ. ಆದರೂ ಮಾನಿಬಾಯಿ ರೈಲು ಹೋಗುವವರೆಗೂ ಗಟ್ಟಿಯಾಗಿ ಕುಳಿತು ಸುರಕ್ಷಿತವಾಗಿ ಹೊರಬಂದಿದ್ದಾಳೆ. ಅಜ್ಜಿಯ ಗಟ್ಟಿತನ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿದೆ. ಗಣೇಶ ಚತುರ್ದಶಿ ದಿನವೇ ಅಜ್ಜಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವುದರಿಂದ ವಿಜ್ಞೆಶ್ವರನೇ ಈ ಅಜ್ಜಿಯನ್ನು ಕಾಪಾಡಿದ್ದಾನೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.