ಕಲಬುರಗಿ: ಕಲ್ಲಂಗಡಿ ಹಾಗೂ ಸೌತೆಕಾಯಿ ಹಣ್ಣು ತಿಂದರೆ ಲಂಗ್ಸ್ ಕ್ಲಿಯರ್ ಆಗುತ್ತೆ, ಇದರಿಂದ ಕೊರೊನಾ ಬರದಂತೆ ನಾವು ತಡೆ ಹಿಡಿಯಬಹುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ನಡೆದ ಕೃಷಿ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಕಲ್ಲಂಗಡಿ ಹಣ್ಣು ತಿಂದರೆ ಕೊರೊನಾ ಬರುತ್ತೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ವಿಜ್ಞಾನಿಗಳ ಪ್ರಕಾರ ಕಲ್ಲಂಗಡಿ ಹಾಗೂ ಸೌತೆಹಣ್ಣು ಜಾಸ್ತಿ ತಿನ್ನಬೇಕು. ಈ ಮೂಲಕ ಲಂಗ್ಸ್ ಕ್ಲಿಯರ್ ಇದ್ದರೆ ಕೊರೊನಾ ಸಹ ಬರುವುದಿಲ್ಲ ಎಂದರು.
ಇದರ ಬಗ್ಗೆ ಜನರಿಗೆ ಮಾಧ್ಯಮದವರು ಹಾಗೂ ಅಧಿಕಾರಿಗಳು ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು. ಸಭೆಗೂ ಮುನ್ನ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಚಂದ್ರಕಾಂತ ಕುಟುಂಬಕ್ಕೆ, ಸರ್ಕಾರದ 5 ಲಕ್ಷ ಹಾಗೂ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಪರಿಹಾರದ ಚೆಕ್ನ್ನು ಬಿ.ಸಿ.ಪಾಟೀಲ್ ವಿತರಿಸಿದರು. ಇದೇ ವೇಳೆ ಮಾತನಾಡಿದ ಸಚಿವರು ಯಾವುದೇ ಕಾರಣಕ್ಕೂ ರೈತರ ಬೆಳೆದ ಸಾಮಗ್ರಿಗಳನ್ನು ಪೊಲೀಸರು ತಡೆಹಿಡಿಯ ಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದರು.