ಚಿಕ್ಕಬಳ್ಳಾಪುರ: ಡ್ರಾಪ್ ಕೊಡುತ್ತೀವಿ ಎಂದು ಹಗ್ಗದಿಂದ ಕುತ್ತಿಗೆ ಬಿಗಿದು ಕಡ್ಡಿಪುಡಿ ವ್ಯಾಪಾರಿಯನ್ನ ಕೊಲೆ ಮಾಡಿ ಹಣ ದೋಚಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕು ನಾಮಗೊಂಡ್ಲು ಗ್ರಾಮದ ಬಳಿ ತಡರಾತ್ರಿ ನಡೆದಿದೆ.
ಆಂಧ್ರದ ಹಿಂದೂಪುರ ಮೂಲದ ವೆಂಕಟೇಶ್ (46) ಕೊಲೆಯಾದ ವ್ಯಾಪಾರಿ. ಇಂದು ಬೆಳಗ್ಗೆ ನಾಮಗೊಂಡ್ಲು ಗ್ರಾಮದ ರಸ್ತೆ ಬದಿ ವೆಂಕಟೇಶ್ ಮೃತದೇಹ ಪತ್ತೆಯಾಗಿತ್ತು. ಬಳಿಕ ಮಾಹಿತಿ ತಿಳಿದ ಎಸ್ಪಿ ಕಾರ್ತಿಕ್ ರೆಡ್ಡಿ, ಶ್ವಾನದಳ ಹಾಗೂ ಬೆರಳಚ್ಚು ತಜÐರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಡ್ಡಿ ಪುಡಿ ಮಾರಾಟದ ಹಣ ಕಲೆಕ್ಷನ್ ಮಾಡಿಕೊಂಡು ಚಿಕ್ಕಬಳ್ಳಾಪುರದಿಂದ ಹಿಂದೂಪುರಕ್ಕೆ ತೆರಳಬೇಕಿದ್ದ ನಾಗರಾಜು ಗೆ ಬಸ್ ಮಿಸ್ ಆಗಿತ್ತು. ಹೀಗಾಗಿ ಚಿಕ್ಕಬಳ್ಳಾಪುರದಿಂದ ಯಾರೋ ಅಪರಿಚಿತರ ಓಮ್ನಿ ಕಾರಿನಲ್ಲಿ ಡ್ರಾಪ್ ತಗೊಂಡಿದ್ದೀನಿ, ಮನೆಗೆ ಬರುತ್ತೀನಿ ಅಂತ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದರು.
ಮಧ್ಯರಾತ್ರಿ 1 ಗಂಟೆಯಾದರೂ ಮನೆಗೆ ಬರಲಿಲ್ಲ ಅಂತ ಮನೆಯವರು ಫೋನ್ ಮಾಡಿದ್ದರು. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಆದರೆ ಬೆಳಗ್ಗೆ ವೆಂಕಟೇಶ್ ಮೃತದೇಹ ಪತ್ತೆಯಾಗಿದ್ದು, ಹಣಕ್ಕಾಗಿ ಒಮ್ನಿ ಕಾರಿನಲ್ಲಿ ಡ್ರಾಪ್ ಕೊಡುತ್ತೀವಿ ಅಂದವರೇ ಕೊಲೆ ಮಾಡಿರಬಹುದು ಅಂತ ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.