– ಪ್ಲಾಸ್ಟಿಕ್ ಮುಕ್ತ, ಶುಲ್ಕ ರಹಿತ ಅಂಗಡಿಗಳಿಗೆ ಅವಕಾಶ
– ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿರೋ ದೊಡ್ಡ ಬಸವಣ್ಣ
ಬೆಂಗಳೂರು: ನಾಳೆಯಿಂದ ಬೆಂಗಳೂರಿನ (Bengaluru) ಐತಿಹಾಸಿಕ ಹಬ್ಬ ಕಡಲೆಕಾಯಿ ಪರಿಷೆ (Kadalekai Parishe) ಆರಂಭವಾಗುತ್ತಿದೆ. ಮೂರು ದಿನದ ಪರಿಷೆಯನ್ನು ಈ ಬಾರಿ ಐದು ದಿನ ನಡೆಸಲು ನಿರ್ಧರಿಸಲಾಗಿದೆ.
ರಾಜಧಾನಿ ಬೆಂಗಳೂರಲ್ಲಿ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಪಾರಂಪರಿಕ ಜಾತ್ರೆ ಬಸವನಗುಡಿಯ ಕಡಲೆಕಾಯಿ ಪರಿಷೆ. ನಾಳೆ ಕಾರ್ತಿಕ ಮಾಸದ ಕೊನೆಯ ದಿನವಾಗಿದ್ದರಿಂದ ಬಸವನಗುಡಿ ಕಡ್ಲೆಕಾಯಿ ಪರಿಷೆ ಆರಂಭವಾಗಲಿದ್ದು, 21 ರವರೆಗೆ ನಡೆಯಲಿದೆ. ಕಳೆದ ವರ್ಷ 5 ಲಕ್ಷಕ್ಕೂ ಅಧಿಕ ಜನರು ಪರಿಷೆಯಲ್ಲಿ ಸೇರಿದ್ದರು. ಈ ವರ್ಷವೂ ಐದು ಲಕ್ಷಕ್ಕಿಂತ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ. ಇದನ್ನೂ ಓದಿ: ಕಾರವಾರದಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ಖಳ ನಟ ಆಶಿಶ್ ವಿದ್ಯಾರ್ಥಿ
ನಾಳೆ ಬೆಳಗ್ಗೆ 10:30 ಕ್ಕೆ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಹಾಗೂ ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸ್ಥಳೀಯ ಶಾಸಕರು ಪರಿಷೆಯನ್ನು ಉದ್ಘಾಟಿಸಲಿದ್ದಾರೆ.
ಈ ಬಾರಿ ಶುಲ್ಕ ರಹಿತವಾಗಿ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದು, ಸಾವಿರಾರು ಅಂಗಡಿಗಳನ್ನು ಈಗಾಗಲೇ ಹಾಕಲಾಗಿದೆ. ಜೊತೆಗೆ ಈ ಬಾರಿ ಪ್ಲಾಸ್ಟಿಕ್ ಮುಕ್ತವಾದ ಪರಿಷೆಯಾಗಿದ್ದು, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡಿದರೆ ಎತ್ತಡಂಗಿ ಮಾಡುವ ಎಚ್ವರಿಕೆ ನೀಡಲಾಗಿದೆ. ಇದನ್ನೂ ಓದಿ: ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ – ಯಾರು ಔಟ್? ಯಾರು ಇನ್?
ಈ ಬಾರಿ ಹಾಸನಾಂಬೆಯಂತೆ ದೊಡ್ಡ ಬಸವಣ್ಣಗೆ ಹೂವಿನ ಅಲಂಕಾರ ಮಾಡಲಾಗಿದೆ. ಜೊತೆಗೆ ಮೈಸೂರು ದಸರಾದಂತೆ ಬಸವನಗುಡಿ ಸುತ್ತಮುತ್ತಲಿನ 9 ರಸ್ತೆಗಳಿಗೆ ದೀಪಾಂಲಕಾರ ಮಾಡಲಾಗಿದೆ. ಲಕ್ಷಾಂತರ ಜನ ಸೇರುವ ನಿರೀಕ್ಷೆಯಿಂದ 900 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

