ಹೈದರಾಬಾದ್: ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿರುವ ನಾಥುರಾಮ್ ಗೋಡ್ಸೆ ಅವರ ಸಿದ್ಧಾಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಬೆಂಬಲಿಸುತ್ತಿದ್ದಾರೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷ ಕೆ.ಟಿ. ರಾಮ್ರಾವ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ. ಪ್ರಧಾನಿ ಮೋದಿ ಮೌನವಾಗಿ ಮತ್ತು ನೇರವಾಗಿ ಗೋಡ್ಸೆಯ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗುಜರಾತ್ ಶಾಸಕನನ್ನು ಅಸ್ಸಾಂ ಪೊಲೀಸರು ಬಂಧಿಸುವಂತೆ ಮಾಡಿದ ಮೋದಿ ಸರ್ಕಾರಕ್ಕೆ ಧೈರ್ಯವಿದ್ದರೆ ತಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ
ಸಮಾಜದ ಕೆಲವು ವರ್ಗಗಳು ಬೆದರಿಕೆ ಮತ್ತು ಅಸುರಕ್ಷಿತ ಭಾವನೆಗಳನ್ನು ಅನುಭವಿಸುವ ಹಲವಾರು ಘಟನೆಗಳು ದೇಶಾದ್ಯಂತ ನಡೆಯುತ್ತಿವೆ. ಇದೆಲ್ಲವೂ ಸಂಪೂರ್ಣವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿದ್ದರೂ ಪ್ರಧಾನಿ ಅವರು ಒಂದು ಮಾತನ್ನೂ ಹೇಳುತ್ತಿಲ್ಲ ಎಂದು ಕಿಡಿಕಾರಿದರು.
ಬಿಜೆಪಿಯ ಏರಿಕೆಯನ್ನು ನಾನು ನೋಡುತ್ತಿಲ್ಲ. ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆ ಅಧಿಕವಾಗುತ್ತಿದೆ. ನಿರುದ್ಯೋಗವು 45 ವರ್ಷಗಳಲ್ಲಿ ಅತ್ಯಧಿಕವಾಗುತ್ತದೆ. ಜೊತೆಗೆ ಹಣದುಬ್ಬರವು 30 ವರ್ಷಗಳಲ್ಲಿ ಗರಿಷ್ಠವಾಗುತ್ತದೆ. ನಾನು ಅದರ ಬಗ್ಗೆ ಮಾತನಾಡಲು ಬಯಸುತ್ತೇನೆ. ಆದರೆ ಇಂದು ದೇಶದಲ್ಲಿ ದಿಕ್ಕು ತಪ್ಪಿಸುವ ತಂತ್ರಗಳು ಗೆಲ್ಲುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹುತಾತ್ಮ ಮಗನ ಫೋಟೋ ನೋಡಿ ಕಣ್ಣೀರಿಟ್ಟ ತಾಯಿ ವೀಡಿಯೋ ವೈರಲ್
ಬಿಜೆಪಿಯ ವಿಫಲ ಮಾದರಿಯನ್ನು ಬಯಲಿಗೆಳೆದು ತೆಲಂಗಾಣದ ಸುವರ್ಣ ಮಾದರಿಯನ್ನು ದೇಶದ ಮುಂದೆ ಬಿಂಬಿಸಲು ಟಿಆರ್ಎಸ್ ಬಯಸಿದೆ. ತೆಲಂಗಾಣದ ಯಶಸ್ವಿ ಮಾದರಿ ರಾಷ್ಟ್ರಮಟ್ಟದಲ್ಲಿ ಕಾರ್ಯಸೂಚಿಯನ್ನು ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.